ಬೆಂಗಳೂರು: ರಾಜ್ಯ ರಾಜಧಾನಿಯ ಟ್ರಾಫಿಕ್ ಕಿರಿಕಿರಿಯಲ್ಲಿ ವಿಮಾನ ನಿಲ್ದಾಣ ತಲುಪಲು ಪರದಾಡುತ್ತಿದ್ದ ಪ್ರಯಾಣಿಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಬಹುನಿರೀಕ್ಷಿತ ಮೆಜೆಸ್ಟಿಕ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು (Suburban Rail) ಯೋಜನೆಗೆ ಕೊನೆಗೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಕೇಂದ್ರ ರೈಲ್ವೆ ಇಲಾಖೆಯು ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿದ್ದು, ಸುಮಾರು ₹4,100 ಕೋಟಿ ವೆಚ್ಚದ ಅಂತಿಮ ವಿನ್ಯಾಸಕ್ಕೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಕೂಡ ಒಪ್ಪಿಗೆ ಸೂಚಿಸಿದೆ.
ಈ ನೂತನ ರೈಲು ಮಾರ್ಗವು ಕೆಎಸ್ಆರ್ ಬೆಂಗಳೂರು ಸಿಟಿ (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಟು ಯಶವಂತಪುರ ಮತ್ತು ಯಲಹಂಕ ಮೂಲಕ ಸಾಗಲಿದೆ. ನಂತರ ಟ್ರಂಪೆಟ್ ಇಂಟರ್ಚೇಂಜ್ ಬಳಿ ತಿರುವು ಪಡೆದುಕೊಂಡು, ಬಿಕೆ ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ಹಾದು ಅಂತಿಮವಾಗಿ ದೇವನಹಳ್ಳಿಯ ಏರ್ಪೋರ್ಟ್ ಟರ್ಮಿನಲ್ ತಲುಪಲಿದೆ. ಈ ಯೋಜನೆಯಲ್ಲಿ ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 8.5 ಕಿ.ಮೀ.ಗಳ ನಿರ್ದಿಷ್ಟ ಮಾರ್ಗವು ಪ್ರಮುಖ ಪಾತ್ರ ವಹಿಸಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಈ ಯೋಜನೆ ಜಾರಿಗೆ ಬಂದರೆ ಬಳ್ಳಾರಿ ರಸ್ತೆ ಹಾಗೂ ಏರ್ಪೋರ್ಟ್ ರಸ್ತೆಯಲ್ಲಿನ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದ್ದು, ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ವಿಮಾನ ನಿಲ್ದಾಣ ತಲುಪಲು ಸಹಕಾರಿಯಾಗಲಿದೆ.
