ಬೆಳ್ತಂಗಡಿ: ಬಹುಚರ್ಚಿತ ಬುರುಡೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲು ಹೊರಟಿದ್ದ ಎಸ್ಐಟಿ (SIT) ತಂಡದ ಅಧಿಕೃತ ವಾಹನವೊಂದು ಚಾರ್ಮಾಡಿ (Charmadi Ghat) ಜಾಗದಲ್ಲಿ ನಿಯಂತ್ರಣ ತಪ್ಪಿ ಭೀಕರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಸ್ಐಟಿ ಎಸ್ಪಿ ಸೇರಿದಂತೆ ನಾಲ್ಕು ಜನ ಅಧಿಕಾರಿಗಳು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಎಸ್ಪಿ ಸಿ.ಎ.ಸೈಮನ್, ಇನ್ಸ್ಪೆಕ್ಟರ್ ಕುಸುಮಾಧರ್, ಸಿಬ್ಬಂದಿ ಪಿ ಸಿ ಮಂಜುನಾಥ್ ಅವರು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಹಾಗೂ ಎಸ್ಐಟಿ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮಾ ಅವರನ್ನು ಭೇಟಿ ಮಾಡಿ, ಬುರುಡೆ ಪ್ರಕರಣದ ಚಿನ್ನಯ್ಯ ಹೈಕೋರ್ಟ್ ರಿಟ್ ಪಿಟಿಷನ್ ಹಾಕಿರುವ ಬಗ್ಗೆ ಮಾತುಕತೆ ನಡೆಸಲು ತೆರಳುತ್ತಿದ್ದರು. ಈ ವೇಳೆ ಜೂನ್ 16 ರಂದು ಮಧ್ಯಾಹ್ನ ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಪೊಲೀಸ್ ಇಲಾಖೆಯ KA-01-G-6463 ಇನ್ನೋವಾ ಕಾರು ಪಲ್ಟಿಯಾಗಿದೆ.
ಇನ್ನೋವಾ ಕಾರಿನಲ್ಲಿ ಚಾಲಕ ಸೇರಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಆದರೆ, ಇನ್ನೋವಾ ಕಾರು ಪಲ್ಟಿಯಾದ ರಭಸಕ್ಕೆ ಭಾರಿ ಹಾನಿಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಕಾರಿನಲ್ಲಿದ್ದ ನಾಲ್ಕು ಜನ ಅಧಿಕಾರಿಗಳು ಆಗಮಿಸಿದ್ದಾರೆ.
