ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ‘ರಾಜಾತಿಥ್ಯ’ ಮತ್ತು ನಡೆಯುತ್ತಿರುವ ಅಕ್ರಮಗಳ ಕುರಿತು ಗಂಭೀರ ದೂರು ಸಲ್ಲಿಕೆಯಾಗಿದೆ. ನಟ ದರ್ಶನ್ ಅವರ ಜಾಮೀನು ಅರ್ಜಿ ರದ್ದುಗೊಳಿಸುವ ಸಂದರ್ಭದಲ್ಲಿ ಜೈಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಪರ್ದಿವಾಲ (Supreme Court Justice Pardiwala) ಅವರಿಗೆ ವಕೀಲರೊಬ್ಬರು ದೂರು ಸಲ್ಲಿಸಿದ್ದಾರೆ.
ವಕೀಲ ಹುಸೇನ್ (Advocate Hussain ) ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪರ್ದಿವಾಲ (Pardiwala) ಮತ್ತು ರಾಷ್ಟ್ರೀಯ ತನಿಖಾ ದಳ (NIA) ಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ ಪರಪ್ಪನ ಅಗ್ರಹಾರ ಜೈಲು, ಅಪರಾಧಿಗಳಿಗೆ ‘ವೆಕೇಷನ್ ಸ್ಥಳ’ (vacation spot)ವಾಗುತ್ತಿದೆ. ಹಿರಿಯ ಅಧಿಕಾರಿಗಳೇ ಈ ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ. ಜೈಲಿನ ಒಳಗೆ ಮಾದಕವಸ್ತುಗಳು ಮತ್ತು ಮೊಬೈಲ್ ಫೋನ್ (mobile phones )ಗಳು ಸುಲಭವಾಗಿ ರವಾನೆಯಾಗುತ್ತಿವೆ. ಅಕ್ರಮಗಳನ್ನು ಮರೆಮಾಚಲು ಜೈಲು ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡುತ್ತಿದ್ದಾರೆ. ಹಾಗೂ ನಕಲಿ ವೈದ್ಯಕೀಯ ಪ್ರಮಾಣಪತ್ರಗಳ ಮೂಲಕ ಕೈದಿಗಳಿಗೆ ಅಕ್ರಮ ರಜೆ ನೀಡಲಾಗುತ್ತಿದೆ. ಅಲ್ಲದೆ, ಆಸ್ಪತ್ರೆಗಳ ದುರುಪಯೋಗ ಮತ್ತು ಅಕ್ರಮ ಬಿಡುಗಡೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಅವ್ಯವಹಾರಗಳನ್ನು ತಡೆಗಟ್ಟಲು ನ್ಯಾಯಾಲಯಕ್ಕೆ ಜೈಲಿನ ಎಲ್ಲಾ ಸಿಸಿಟಿವಿ (CCTV) ದೃಶ್ಯಗಳನ್ನು ಒದಗಿಸುವಂತೆ ಮತ್ತು ಸಮಗ್ರ ತನಿಖೆಯನ್ನು ನ್ಯಾಯಾಂಗದ ಮೇಲ್ವಿಚಾರಣೆಯಡಿಯಲ್ಲಿ ನಡೆಸುವಂತೆ ಆಗ್ರಹಿಸಿದ್ದಾರೆ. ಹಾಗೂ ನಟ ದರ್ಶನ್ ಪ್ರಕರಣದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ನೀಡಿದ್ದ ಸೂಚನೆಗಳ ಉಲ್ಲಂಘನೆಯಾಗುತ್ತಿರುವುದನ್ನು ದೂರಿನಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
