ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಇಡೀ ಸಮಾಜವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ನಡೆದಿದೆ. ತಾಲೂಕಿನ ಬಂಡಲ ಗ್ರಾಮದ ತೋಡದಗದ್ದೆ ಬಳಿ ಇರುವ ಸರ್ಕಾರಿ ಹಾಸ್ಟೆಲ್ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಕಿಟಕಿಯಿಂದ ಎಸೆದ ಪರಿಣಾಮ ಶಿಶು ಸಾ*ವು
ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿ ಇಂದು ಬೆಳಿಗ್ಗೆ ಹಾಸ್ಟೆಲ್ನ ಶೌಚಾಲಯದಲ್ಲಿಯೇ ಹೆರಿಗೆ ಮಾಡಿಕೊಂಡಿದ್ದಾಳೆ. ಆಘಾತಕಾರಿ ವಿಚಾರವೆಂದರೆ, ಹೆರಿಗೆಯಾದ ತಕ್ಷಣವೇ ಆಕೆ ಹುಟ್ಟಿದ ಹೆಣ್ಣು ಮಗುವನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಇದರ ಪರಿಣಾಮವಾಗಿ ನವಜಾತ ಶಿಶು ಮೃ*ತಪಟ್ಟಿದ್ದು, ಮಗುವಿನ ಸಾ*ವಿನ ನಂತರವಷ್ಟೇ ಈ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ದೊಡ್ಡಪ್ಪನ ಮಗನಿಂದಲೇ ಅ*ತ್ಯಾ*ಚಾರದ ಆರೋಪ
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಗಂಭೀರ ಆರೋಪವೊಂದನ್ನು ಮಾಡಿದ್ದಾಳೆ. ತನ್ನ ದೊಡ್ಡಪ್ಪನ ಮಗನೇ ತನ್ನ ಮೇಲೆ ಅ*ತ್ಯಾ*ಚಾರ ಎಸಗಿದ್ದರಿಂದ ತಾನು ಗರ್ಭಧರಿಸಿದ್ದಾಗಿ ಆಕೆ ತಿಳಿಸಿದ್ದಾಳೆ. ವಿಷಯ ತಿಳಿದ ತಕ್ಷಣವೇ ಶಿರಸಿ ತಹಶೀಲ್ದಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ಆಸ್ಪತ್ರೆಗೆ ದಾಖಲು ಹಾಗೂ ತನಿಖೆ ಚುರುಕು
ಹೆರಿಗೆಯಿಂದಾಗಿ ಅಸ್ವಸ್ಥಗೊಂಡಿರುವ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ, ತಕ್ಷಣವೇ ಶಿರಸಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಹಾಸ್ಟೆಲ್ನಲ್ಲಿಯೇ ಬಾಲಕಿ ಗರ್ಭಿಣಿಯಾಗಿದ್ದರೂ, ತಿಂಗಳುಗಳ ಕಾಲ ಅದು ವಾರ್ಡನ್ ಅಥವಾ ಇತರ ಮೇಲ್ವಿಚಾರಕರ ಗಮನಕ್ಕೆ ಬಾರದೆ ಹೋಗಿರುವುದು ತೀವ್ರ ನಿರ್ಲಕ್ಷ್ಯವನ್ನು ಎತ್ತಿತೋರಿಸಿದೆ.
