ಬೆಳಗಾವಿ: ರಾಜ್ಯ ಕಾಂಗ್ರೆಸ್ನಲ್ಲಿ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆ ಕುರಿತ ‘ನವೆಂಬರ್ ಕ್ರಾಂತಿ’ಯ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ನ ತುರ್ತು ಬುಲಾವ್ ಮೇರೆಗೆ ನಾಳೆ (ಸೋಮವಾರ) ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕೆ.ಸಿ.ವಿ.ಯಿಂದ ತಡರಾತ್ರಿ ಕರೆ: ಮೂಲಗಳ ಪ್ರಕಾರ, ನವೆಂಬರ್ 25ರೊಳಗೆ ರಾಜ್ಯ ನಾಯಕತ್ವದ ಗೊಂದಲಗಳನ್ನು ಬಗೆಹರಿಸುವಂತೆ ಈ ಹಿಂದೆ ಸತೀಶ್ ಜಾರಕಿಹೊಳಿ ಅವರು ಪಕ್ಷದ ಹೈಕಮಾಂಡ್ಗೆ ಗಡುವು ನೀಡಿದ್ದರು. ಈ ಬೆಳವಣಿಗೆಯ ಮಧ್ಯೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತಡರಾತ್ರಿ ಜಾರಕಿಹೊಳಿ ಅವರಿಗೆ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು: ಬೆಳಗಾವಿಯಿಂದ ದೆಹಲಿಗೆ ತೆರಳಲಿರುವ ಸತೀಶ್ ಜಾರಕಿಹೊಳಿ ಅವರು, ಹೈಕಮಾಂಡ್ ನಾಯಕರೊಂದಿಗೆ ‘ನವೆಂಬರ್ ಕ್ರಾಂತಿ’ ಬಿಕ್ಕಟ್ಟಿನ ಕುರಿತು ಪ್ರಮುಖ ಚರ್ಚೆ ನಡೆಸುವ ಸಾಧ್ಯತೆ ಇದೆ. ಸತೀಶ್ ಅವರು ಪ್ರಸ್ತುತ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದು, ಈ ಕುರಿತು ಮಾತುಕತೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಸಂಪುಟ ಪುನಾರಚನೆ ಗೊಂದಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಸತೀಶ್ ಜಾರಕಿಹೊಳಿ ಅವರು ಅಹಿಂದ ವರ್ಗದಲ್ಲಿ ಪ್ರಬಲ ನಾಯಕತ್ವ ಹೊಂದಿದ್ದು, ಇತ್ತೀಚೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರಅವರು ಸತೀಶ್ ಜಾರಕಿಹೊಳಿ ಅವರನ್ನು ಅಹಿಂದ ನಾಯಕತ್ವಕ್ಕೆ ಪ್ರಸ್ತಾಪಿಸಿದ್ದರು.
ಜಾರಕಿಹೊಳಿ ಅವರು ಈಗಾಗಲೇ 2028ಕ್ಕೆ ಸಿಎಂ ಸ್ಥಾನಕ್ಕೆ ಕ್ಲೈಮ್ ಮಾಡುವುದಾಗಿ ಹೇಳಿಕೊಂಡಿರುವುದು ರಾಜ್ಯ ಕಾಂಗ್ರೆಸ್ನಲ್ಲಿ ‘ಕುರ್ಚಿ ಕಂಪನ’ ಸೃಷ್ಟಿಸಿದೆ. ನಾಯಕ (ವಾಲ್ಮೀಕಿ) ಸಮುದಾಯದ ಪ್ರಬಲ ನಾಯಕರಾದ ಸತೀಶ್ ಜಾರಕಿಹೊಳಿ ಅವರ ದಿಢೀರ್ ದೆಹಲಿ ಭೇಟಿ, ಸದ್ಯದಲ್ಲಿಯೇ ರಾಜ್ಯ ಕಾಂಗ್ರೆಸ್ನಲ್ಲಿ ಪ್ರಮುಖ ಸಂಘಟನಾತ್ಮಕ ಬದಲಾವಣೆಗಳು ಅಥವಾ ಸಂಪುಟ ಪುನಾರಚನೆ ಕುರಿತ ನಿರ್ಧಾರಗಳು ಹೊರಬೀಳುವ ಸಾಧ್ಯತೆಯನ್ನು ಹೆಚ್ಚಿಸಿದೆ.






