ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ (Upendra ) ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ (Priyanka Upendra) ಅವರ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣದ ತನಿಖೆಯಲ್ಲಿ ಸದಾಶಿವನಗರ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭಿಸಿದೆ. ಈ ಸೈಬರ್ ಫ್ರಾಡ್ನ ಹಿಂದೆ ಬಿಹಾರದಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಘಟನೆ ನಡೆದಿದ್ದು ಹೇಗೆ?
- ಲಿಂಕ್ ಕ್ಲಿಕ್ ಮಾಡಿದ ಪ್ರಿಯಾಂಕ: ಸೆಪ್ಟೆಂಬರ್ 15 ರಂದು ಆನ್ಲೈನ್ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದ ಪ್ರಿಯಾಂಕ ಉಪೇಂದ್ರ ಅವರಿಗೆ ಸೈಬರ್ ಖದೀಮರು ಒಂದು ಲಿಂಕ್ ಕಳುಹಿಸಿ ಓಟಿಪಿ (OTP) ಹೇಳುವಂತೆ ತಿಳಿಸಿದ್ದರು. ಪ್ರಿಯಾಂಕ ಅವರು ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಅವರ ಮೊಬೈಲ್ ವಾಟ್ಸಾಪ್ ಹ್ಯಾಕ್ ಆಗಿತ್ತು.
- ದೊಡ್ಡ ಜಾಲಕ್ಕೆ ವಿಸ್ತರಣೆ: ತಕ್ಷಣವೇ ಖದೀಮರು ಪ್ರಿಯಾಂಕ ಅವರ ಕಾಂಟ್ಯಾಕ್ಟ್ನಲ್ಲಿ ಇದ್ದವರಿಗೆ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿದ್ದರು. ಪ್ರಿಯಾಂಕ ತಮ್ಮ ಪತಿ ಉಪೇಂದ್ರ ಮತ್ತು ಮ್ಯಾನೇಜರ್ ನಂಬರ್ನಿಂದ ಕರೆ ಮಾಡಲು ಯತ್ನಿಸಿದಾಗ, ಆ ಎರಡೂ ಮೊಬೈಲ್ಗಳನ್ನು ಹ್ಯಾಕ್ ಮಾಡಿದ್ದರು.
- ಹಣ ವರ್ಗಾವಣೆ: ‘ತುರ್ತು ಇದೆ, ಹಣ ಹಾಕಿ’ ಎಂದು ಪ್ರಿಯಾಂಕ ವಾಟ್ಸಾಪ್ನಿಂದ ಸಂದೇಶ ಕಳುಹಿಸಿದಾಗ, ಹಲವರು ನಂಬಿ ಹಣ ಹಾಕಿದರು. ಸ್ನೇಹಿತರು ಕರೆ ಮಾಡಿದರೂ ಕಡಿತವಾಗುತ್ತಿತ್ತು. ಈ ರೀತಿ, ಉಪೇಂದ್ರ ಅವರ ಪುತ್ರನೂ ಸೇರಿದಂತೆ ಹಲವರು ಒಂದೂವರೆ ಲಕ್ಷ ರೂಪಾಯಿ (₹1.5 lakh) ಹಣವನ್ನು ಕಳೆದುಕೊಂಡಿದ್ದರು.
ಪ್ರಿಯಾಂಕ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಾ ಹೋದರು.
- ಆರೋಪಿ ಬಂಧನ: ಈ ಜಾಲದ ಪ್ರಮುಖ ಆರೋಪಿ, ಬಿಹಾರದ ದಶರತಪುರದ ನಿವಾಸಿ ವಿಕಾಸ್ ಕುಮಾರ್ (Vikas Kumar) (20-25 ವರ್ಷ ವಯಸ್ಸಿನ ಯುವಕ) ನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
- ಪೊಲೀಸರಿಗೆ ಶಾಕ್: ಬಿಹಾರಕ್ಕೆ ತೆರಳಿದ್ದ ಪೊಲೀಸರಿಗೆ ಅಲ್ಲಿನ ಪರಿಸ್ಥಿತಿ ನೋಡಿ ಶಾಕ್ ಆಗಿದೆ. ಆ ಹಳ್ಳಿಯ 150ಕ್ಕೂ (150 youths )ಹೆಚ್ಚು ಯುವಕರು ಇದೇ ಸೈಬರ್ ಅಪರಾಧ ದಂಧೆಯಲ್ಲಿ ನಿರತರಾಗಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯ ಬಂಧಿತ ಆರೋಪಿ ವಿಕಾಸ್ ಕುಮಾರ್ನನ್ನು ಕಸ್ಟಡಿಗೆ ಪಡೆದಿರುವ ಕೇಂದ್ರ ವಿಭಾಗದ ಸೈಬರ್ ಮತ್ತು ಸದಾಶಿವನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






