ಕೊಡಗು: ಕಾರಿನಲ್ಲಿ ಮಹಿಳೆಯ ಶವ ಸಾಗಿಸುತ್ತಿದ್ದ ವೇಳೆ ಹರಿಯಾಣ ಮೂಲದ ಮೂವರನ್ನ ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮಾಲ್ದಾರೆ ಚೆಕ್ಪೋಸ್ಟ್ ನಲ್ಲಿ ನಡೆದಿದೆ.
ಹರಿಯಾಣ ಮೂಲದ ಮಹಿಳೆ ಮೃತ ದುರ್ಧೈವಿಯಾಗಿದ್ದಾರೆ. ಶುಕ್ರವಾರ ರಾತ್ರಿ ವಿರಾಜಪೇಟೆ ವ್ಯಾಪ್ತಿಯ ಸಿದ್ದಾಪುರ ಸಮೀಪದ ಮಾಲ್ದಾರೆ ಲಿಂಗಪುರ ಫಾರೆಸ್ಟ್ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಕಾರನ್ನ ತಪಾಸಣೆಗೆಂದು ತಡೆದಿದ್ದರು. ಈ ವೇಳೆ ಕಾರಿನಲ್ಲಿದ್ದವರ ಚಲನವಲನದಲ್ಲಿ ಅನುಮಾನ ಮೂಡಿದ್ದು ಹರಿಯಾಣ ನೋಂದಣಿ ಹೊಂದಿದ ಆಲ್ಟೋ ಕಾರನ್ನ ಕೂಲಂಕುಷವಾಗಿ ತಪಾಸಣೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೆ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸುವ ವೇಳೆ ಶವ ಸಾಗಿಸುತ್ತಿರೋದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತ ಮಹಿಳೆ ಹರಿಯಾಣ ಮೂಲದಳಾಗಿದ್ದು ಮೈಸೂರಿನಲ್ಲಿ ಎರಡನೇ ಮದುಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ಎರಡನೇ ಗಂಡನೊಂದಿಗೆ ಕಲಹ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮಹಿಳೆಯ ಶವವನ್ನ ಏನು ಮಾಡಬೇಕೆಂದು ತಿಳಿಯದೇ ಕಾರಿನಲ್ಲಿ ಕೊಡಗಿನ ಕಾಡಿನಲ್ಲಿ ಎಸೆದು ಹೋಗಲು ತಂದಿರುವ ಶಂಕೆ ವ್ಯಕ್ತವಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನು ಪ್ರಕರಣ ಮೈಸೂರಿನಲ್ಲಿ ನಡೆದ ಹಿನ್ನಲೆ ಪ್ರಕಣವನ್ನ ಮೈಸೂರಿಗೆ ವರ್ಗಾಯಿಸಲಾಗಿದೆ.






