ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಸಂಚಲನಕಾರಿ ಅಪಹರಣ ಪ್ರಕರಣವನ್ನು ಪೊಲೀಸರು ಕೇವಲ 12 ಗಂಟೆಗಳಲ್ಲಿ ಭೇದಿಸಿದ್ದಾರೆ. ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ 8 ಮಂದಿ ಖತರ್ನಾಕ್ ಆರೋಪಿಗಳನ್ನು ಕೋರಮಂಗಲ ಪೊಲೀಸರು (Koramangala Police) ಬಂಧಿಸಿದ್ದಾರೆ.
ಬಂಧಿತರಲ್ಲಿ ಆಶ್ಚರ್ಯಕರ ವಿಷಯವೆಂದರೆ, ಕೋಲಾರ ಜಿಲ್ಲೆಯ ಕಾನ್ಸ್ಟೇಬಲ್ ಆಗಿರುವ ಛಲಪತಿಗೂ (Constable Chalapathi)ಈ ಅಪಹರಣದಲ್ಲಿ ನೇರ ಸಂಬಂಧವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರೆ ಬಂಧಿತರಲ್ಲಿ ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ ಒಟ್ಟು 8 ಜನರಿದ್ದಾರೆ.
ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಕಾಲ್ ಸೆಂಟರ್ (Global Connect Telecom Pvt. Ltd) ಬಳಿ ನಿನ್ನೆ ಮಧ್ಯರಾತ್ರಿ ಆರೋಪಿಗಳು ಕಾರಿನಲ್ಲಿ ಬಂದು, “ನಾವು ಪೊಲೀಸರು” ಎಂದು ಸುಳ್ಳು ಹೇಳಿ ನಾಲ್ವರು ಉದ್ಯೋಗಿಗಳಾದ — ಪವನ್, ರಾಜ್ ವೀರ್, ಆಕಾಶ್, ಅನಸ್ — ಇವರನ್ನು ಕರೆದು ಕಾರಿನಲ್ಲಿ ಕೂರಿಸಿಕೊಂಡು ನೇರವಾಗಿ ಕಿಡ್ನಾಪ್ (kidnapp) ಮಾಡಿದ್ದರು.
ಮುಂಜಾನೆ 4 ಗಂಟೆಗೆ ವಿಷಯ ತಿಳಿದ ಬಿಪಿಒ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆ ತಕ್ಷಣವೇ ನಾಲ್ಕು ತಂಡಗಳನ್ನು ರಚಿಸಿ ಅಪಹರಣಕಾರರ ಹುಡುಕಾಟ ಆರಂಭಿಸಿತು.
ಅಪಹರಣದ ನಂತರ ಆರೋಪಿಗಳು ಕಾಲ್ ಸೆಂಟರ್ ಆಪರೇಷನ್ ಮ್ಯಾನೇಜರ್ಗೆ ಕರೆ ಮಾಡಿ 25 ಲಕ್ಷ ರೂ. (₹25 Lakh) ಬೇಡಿಕೆ ಇಟ್ಟಿದ್ದರು. ಒತ್ತಡಕ್ಕೆ ಮಣಿದ ಮ್ಯಾನೇಜರ್ ಅಕೌಂಟ್ನಿಂದ 18 ಲಕ್ಷ ರೂ. (₹18 Lakh) ಅನ್ನು ವರ್ಗಾವಣೆ ಮಾಡಿಕೊಂಡಿದ್ದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಿದ್ದ ಸ್ಥಳ ಪತ್ತೆಯಾಯಿತು. ಆರೋಪಿಗಳು ಹೊಸಕೋಟೆಯ ಒಂದು ಲಾಡ್ಜ್ನಲ್ಲಿ ನಾಲ್ವರನ್ನು ಕೂಡಿ ಹಾಕಿದ್ದರು.
ತಕ್ಷಣ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರು ಉದ್ಯೋಗಿಗಳನ್ನು ಸುರಕ್ಷಿತವಾಗಿ ರಕ್ಷಿಸಿದರು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಬಂಧಿಸಿ, ಅವರು ಬಳಸಿದ್ದ ಎರಡು ಕಾರುಗಳನ್ನು ಸೀಜ್ (seized) ಮಾಡಿದ್ದಾರೆ.
ಬಂಧಿತರಲ್ಲಿ ಛಲಪತಿ (ಕೋಲಾರ ಜಿಲ್ಲೆಯ ಕಾನ್ಸ್ಟೇಬಲ್), ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ ಒಟ್ಟು 8 ಮಂದಿ ಖತರ್ನಾಕ್ ಯುವಕರಿದ್ದಾರೆ. ಎಲ್ಲರೂ 27-30 ವರ್ಷದ ಒಳಗಿನ ಯುವಕರು.
ಇತ್ತೀಚೆಗೆ ನಡೆದ ಕಾಲ್ ಸೆಂಟರ್ ರೇಡ್ ಪ್ರಕರಣಗಳ ಬಂಡವಾಳ ಮಾಡಿಕೊಂಡು, ತಾವು ಪೊಲೀಸರು ಎಂದು ಬೆದರಿಸಿ ಸುಲಿಗೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.






