ಪಣಜಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಗೋವಾದಲ್ಲಿ ನಡೆದ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಚಿತ್ರದ ದೈವವನ್ನು ಅವಮಾನಿಸಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿ (HJS) ರಣವೀರ್ ಸಿಂಗ್ ವಿರುದ್ಧ ಪಣಜಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದೆ.
ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ತೋರಿಸಲಾದ ಪವಿತ್ರ ಚಾಮುಂಡಿ ದೈವವನ್ನು ವೇದಿಕೆಯ ಮೇಲೆ ಅಣಕಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಣವೀರ್ ಸಿಂಗ್ ಅವರು ವೇದಿಕೆಯ ಮೇಲೆ ‘ಕಾಂತಾರ’ ಚಿತ್ರದ ದೈವದ ಹಾವಭಾವಗಳನ್ನು ಅನುಕರಿಸಿದ್ದಲ್ಲದೆ, ತುಳು ಸಮುದಾಯದ ಆರಾಧ್ಯ ದೈವವಾದ ಚಾಮುಂಡಿ ದೈವವನ್ನು “ಮಹಿಳಾ ದೆವ್ವ” (Female Ghost) ಎಂದು ಸಂಬೋಧಿಸಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರಾದ ಪ್ರಮೋದ್ ತುವೇಕರ್ ಮತ್ತು ದಿಲೀಪ್ ಶೆಟ್ ಅವರು ಪಣಜಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಾಹಿನ್ ಶೆಟ್ ಅವರಿಗೆ ಮನವಿ ಸಲ್ಲಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
“ಚಾಮುಂಡಿ ದೈವವು ತುಳು ಸಮುದಾಯದ ಪವಿತ್ರ ಕೌಟುಂಬಿಕ ದೈವವಾಗಿದೆ. ಇಂತಹ ದೈವವನ್ನು ಹೀನಾಯವಾಗಿ ಬಿಂಬಿಸುವುದು ಅಥವಾ ‘ದೆವ್ವ’ ಎಂದು ಕರೆಯುವುದು ಅಕ್ಷಮ್ಯ ಅಪರಾಧ. ಇಂತಹ ಕೃತ್ಯಗಳು ಸಾರ್ವಜನಿಕರಲ್ಲಿ ಅಸಮಾಧಾನವನ್ನು ಉಂಟುಮಾಡುವುದಲ್ಲದೆ ಶಾಂತಿಯನ್ನು ಕದಡಬಹುದು” ಎಂದು ಸಮಿತಿ ಎಚ್ಚರಿಸಿದೆ.
ರಿಷಬ್ ಶೆಟ್ಟಿ ಎಚ್ಚರಿಸಿದ್ದರೂ ಕೇಳದ ರಣವೀರ್?
ಈ ವಿವಾದವು ಇದೀಗ ಮತ್ತಷ್ಟು ಕಾವು ಪಡೆದುಕೊಂಡಿದೆ. ವರದಿಗಳ ಪ್ರಕಾರ, ‘ಕಾಂತಾರ’ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ದೈವದ ಅನುಕರಣೆ ಮಾಡದಂತೆ ರಣವೀರ್ ಸಿಂಗ್ ಅವರಿಗೆ ಮೊದಲೇ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೂ ರಣವೀರ್ ವೇದಿಕೆಯ ಮೇಲೆ ದೈವದ ಅನುಕರಣೆ ಮಾಡಿರುವುದು ಮತ್ತು ಅದನ್ನು ದೆವ್ವಕ್ಕೆ ಹೋಲಿಸಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ.






