ಚಿಕ್ಕಮಗಳೂರು: ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಸಂಗೀತ್ ಸಾಗರ್ (Director Sangeeth Sagar) ಅವರು ನಿಧನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ(Hariharapura) ಅವರು ತಮ್ಮ ‘ಪಾತ್ರಧಾರಿ’ (Patradhari) ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದರು. ಚಿತ್ರೀಕರಣ ನಡೆಯುತ್ತಿದ್ದಾಗಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಂಗೀತ್ ಸಾಗರ್ ಮೂಲತಹ ಸಕಲೇಶಪುರದ ದೊಡ್ಡನಾಗರದವರಾಗಿದ್ದು, 8ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ದೇಶಿದಿದ್ದಾರೆ.
ಕಳೆದ 20 ದಿನಗಳಿಂದ ಹರಿಹರಪುರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿತ್ತು. ಇಂದು ಕುಂಬಳಕಾಯಿ ಶಾಸ್ತ್ರ ಮಾಡಿ ಕೊನೆಯ ಚಿತ್ರೀಕರಣ ಮುಗಿಸಬೇಕಿತ್ತು.
ಆಸ್ಪತ್ರೆಯಲ್ಲಿ ನಟ ಸಂಜು ಬಸಯ್ಯ (Actor Sanju Basayya ) ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಆಪ್ತರು ನಿರ್ದೇಶಕ ಸಂಗೀತ್ ಸಾಗರ್ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.






