ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಬಂಧಿಯಾಗಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ನಟ ದರ್ಶನ್ (Darshan) ಅವರಿಗೆ ಜೈಲಿನಲ್ಲಿ ಟಿವಿ ವೀಕ್ಷಣೆಗೆ (TV Access) ಅವಕಾಶ ಕಲ್ಪಿಸುವಂತೆ 57ನೇ ಸಿಟಿ ಸಿವಿಲ್ ಕೋರ್ಟ್ (CCH Court) ಆದೇಶ ನೀಡಿದೆ. ಆದರೆ, ಈ ಆದೇಶದ ಪ್ರತಿಯು ಇನ್ನೂ ಜೈಲಾಧಿಕಾರಿಗಳಿಗೆ (Jail Authorities) ತಲುಪಿಲ್ಲ.
ನಟ ದರ್ಶನ್ ಇರುವ ಬ್ಯಾರಕ್ಗೆ ಟಿವಿ (TV) ನೀಡುವಂತೆ, ಅಥವಾ ಅದು ಸಾಧ್ಯವಾಗದಿದ್ದರೆ ಟಿವಿ ಇರುವ ಬ್ಯಾರಕ್ನಲ್ಲಿ ವೀಕ್ಷಣೆಗೆ ಅವಕಾಶ ನೀಡುವಂತೆ ಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶದ ಪ್ರತಿ ಜೈಲಾಧಿಕಾರಿಗಳಿಗೆ ತಲುಪದೇ ಇರುವುದರಿಂದ, ಟಿವಿ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ.
ಇಂದು (ಶುಕ್ರವಾರ) ಆದೇಶ ಪ್ರತಿ ತಲುಪಿದ ತಕ್ಷಣ, ಜೈಲಿನ ಹಿರಿಯ ಅಧಿಕಾರಿಗಳು ಎಡಿಜಿಪಿ ದಯಾನಂದ್ (ADGP Dayanand) ಅವರೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಭದ್ರತಾ ದೃಷ್ಟಿಯಿಂದ ದರ್ಶನ್ (Darshan) ಇರುವ ಬ್ಯಾರಕ್ಗೆ ಪ್ರತ್ಯೇಕ ಟಿವಿ ನೀಡಲು ಜೈಲಾಧಿಕಾರಿಗಳು ಹಿಂದೇಟು ಹಾಕಿದ್ದು, ಟಿವಿ ಇರುವ ಬ್ಯಾರಕ್ಗೆ ಹೋಗಿ ನೋಡಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
‘ಡೆವಿಲ್’ ಪ್ರಚಾರಕ್ಕಾಗಿ ಟಿವಿ ಬೇಡಿಕೆ?
ಜೈಲಿನಲ್ಲಿರುವ ದರ್ಶನ್ (Darshan) ಮತ್ತು ಅವರ ಸಹಚರರು (‘ಡಿ-ಗ್ಯಾಂಗ್’) “ನಮಗೆ ಟಿವಿ ಯಾವಾಗ ಕೊಡ್ತೀರಾ?” ಎಂದು ವಿಚಾರಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ, ಈಗಾಗಲೇ ಅವರ ‘ದಿ ಡೆವಿಲ್’ (The Devil) ಚಿತ್ರದ ಪ್ರಚಾರ (Promotion) ಜೋರಾಗಿ ಶುರುವಾಗಿರುವುದೆ. ಪತ್ನಿ ವಿಜಯಲಕ್ಷ್ಮೀ (Vijayalakshmi) ಅವರ ನೇತೃತ್ವದಲ್ಲಿ ಚಿತ್ರತಂಡವು ‘ಡೆವಿಲ್’ ಚಿತ್ರದ ಪ್ರಚಾರ ಆರಂಭಿಸಿದೆ.
ಇಂದು ಚಿತ್ರದ ಟ್ರೈಲರ್ (Trailer) ಬಿಡುಗಡೆಯಾಗಿದೆ ಹಾಗೂ ಡಿಸೆಂಬರ್ 11ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದ ಹವಾ ಹೇಗಿದೆ ಮತ್ತು ಸಿನಿಮಾ ಅಪ್ಡೇಟ್ಗಳನ್ನು (Updates) ತಿಳಿಯಲು ದರ್ಶನ್ ಅವರು ಟಿವಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತಾವೇ ನೇರವಾಗಿ ಕೇಳಿದರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಭಾವಿಸಿ, ಕಾರು ಚಾಲಕ ಲಕ್ಷ್ಮಣ್ ಮೂಲಕ ಟಿವಿಗಾಗಿ ಮನವಿ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೈಲಾಧಿಕಾರಿಗಳ ಸಭೆಯ ನಂತರ ದರ್ಶನ್ಗೆ ‘ದಿ ಡೆವಿಲ್’ ಅಪ್ಡೇಟ್ ತಿಳಿಯುವ ಭಾಗ್ಯ ಸಿಗುತ್ತಾ ಎಂಬುದು ಇಂದು ನಿರ್ಧಾರವಾಗಲಿದೆ.






