ಬೆಳಗಾವಿ: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ‘ನಡೆದಾಡುವ ದೇವರು’ ಎಂದು ಕರೆಯುತ್ತಾರೆ. ಅವರ ಘನತೆಗೆ ಮಸಿ ಬಳಿಯಬೇಕು ಎಂಬುದು ಈ ಪಿತೂರಿಗಾರರ ಉದ್ದೇಶವಾಗಿದೆ (Pre-planned conspiracy) ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Soudha) ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C.T. Ravi) ಅವರು ಧರ್ಮಸ್ಥಳ ಪ್ರಕರಣ (Dharmasthala Case) ಮತ್ತು ಅದರ ತನಿಖೆಯ ಕುರಿತು ಮಾತನಾಡುತ್ತಾ, ನಾನು ಎಸ್.ಐ.ಟಿ. ರಚನೆ ಆಗುವುದಕ್ಕಿಂತ ಮುಂಚಿತವಾಗಿಯೇ ಹೇಳಿದ್ದೆ, ಇದು ಒಂದು ಪೂರ್ವ ನಿಯೋಜಿತ ಷಡ್ಯಂತ್ರ ಎಂದರು.
“ನನ್ನನ್ನು ಅನೇಕ ಜನ ಹಿಯ್ಯಾಳಿಸಿದ್ರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದರು. ಇದು ಕಪೋಲಕಲ್ಪಿತ ಆರೋಪ ಎಂಬುವುದು ನನ್ನ ವಾದವಾಗಿತ್ತು.ಎಸ್.ಐ.ಟಿ. ಪ್ರಾಥಮಿಕ ತನಿಖೆಯಲ್ಲಿ ಇದು ಷಡ್ಯಂತ್ರ ಅಂತ ಹೇಳಿದೆ. ಬುರಡೆ ಗ್ಯಾಂಗ್ ಮೇಲೆ ಸರ್ಕಾರ ಹೆಚ್ಚು ನಂಬಿಕೆ ಇಟ್ಟಿತು. ಆರೋಪ ಮಾಡುವವರ ಪೂರ್ವಭಾವ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿರೋದು ಸಾಬೀತಾಗಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಹೇಳಿಕೆ:
ನಂತರ ಮಾಧ್ಯಮಗಳೊಂದಿಗೆ ಸಿ.ಟಿ. ರವಿ ಪ್ರಸ್ತಾಪಿಸಿದ ಚಾರ್ಜ್ ಶೀಟ್ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಚಾರ್ಜ್ ಶೀಟ್ ನೋಡಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕರಲ್ಲಿ ಅಪಸ್ವರ ಮೂಡಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ, ಅವೆಲ್ಲಾ ಏನೂ ಇಲ್ಲಾ. ಸಿಎಲ್ಪಿ ಸಭೆಯಲ್ಲಿ (CLP Meeting) ಏನೇನು ಚರ್ಚೆ ನಡೆದಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿನ ನಾಯಕತ್ವ ಬದಲಾವಣೆ ಚರ್ಚೆ ಕುರಿತು ಪ್ರತಿಕ್ರಿಯಿಸಿ, “ಹೈಕಮಾಂಡ್ (High Command) ತೀರ್ಮಾನವೇ ಅಂತಿಮ,” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು ಯತ್ನಿಸಿದರು.






