ಬೆಂಗಳೂರು: ‘ಕಾಂತಾರ’ ಖ್ಯಾತಿಯ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ ಅವರು ನಟ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ (The Devil) ಚಿತ್ರಕ್ಕೆ ಶುಭ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಕ್ಕೆ ನೆಟ್ಟಿಗರು ರಿಷಬ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.
ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ದೃಶ್ಯವನ್ನು ಅನುಕರಿಸಿದ ವಿವಾದ ತಣ್ಣಗಾಗುವ ಮುನ್ನವೇ, ರಿಷಬ್ ಶೆಟ್ಟಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಂತಾಗಿದೆ.
ದರ್ಶನ್ ಅವರ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಬಿಡುಗಡೆಯ ಮುನ್ನಾ ದಿನವಾದ ನಿನ್ನೆ, ರಿಷಬ್ ಶೆಟ್ಟಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ, “@dasadarshan ಸರ್ ಮತ್ತು ಇಡೀ ಡೆವಿಲ್ ತಂಡಕ್ಕೆ ಬ್ಲಾಕ್ಬಸ್ಟರ್ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ಚಿತ್ರವು ಸದ್ದು ಮಾಡಲಿ,” (May the film set the screens on fire) ಎಂದು ಬರೆದುಕೊಂಡಿದ್ದರು. ಅಜನೀಶ್ ಲೋಕನಾಥ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಅವರಿಗೆ ಟ್ಯಾಗ್ ಮಾಡಿದ್ದರು.
ಆದರೆ, ಈ ಪೋಸ್ಟ್ ನೆಟ್ಟಿಗರಿಗೆ ಮತ್ತು ಸಿನಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಹಾಗೂ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಟನ ಪರವಾಗಿ ಸಾರ್ವಜನಿಕ ಬೆಂಬಲ ವ್ಯಕ್ತಪಡಿಸುವುದು ಅನುಚಿತ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನೀವು ಯಾವುದೇ ಮೌಲ್ಯಗಳಿಲ್ಲದ ವ್ಯಕ್ತಿಗೆ ಶುಭ ಹಾರೈಸುತ್ತಿದ್ದೀರಿ. ಒಬ್ಬ ಜಂಟಲ್ಮನ್ ಆದವರು ಇಂಥವರನ್ನು ಕಡೆಗಣಿಸಬೇಕು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಒಬ್ಬ ಕ್ರಿಮಿನಲ್ ಮತ್ತು ಕೊಲೆ ಆರೋಪಿಗೆ ನೀವು ಶುಭ ಹಾರೈಸುತ್ತಿದ್ದೀರಿ, ಇದು ನಾಚಿಕೆಗೇಡಿನ ಸಂಗತಿ. ಇದೇನಾ ನಿಮ್ಮ ಯು-ಟರ್ನ್?” ಎಂದು ಕಟುವಾಗಿ ಟೀಕಿಸಿದ್ದಾರೆ. “ಸರ್, ಜೀವನದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವುದು ಮುಖ್ಯ. ಈ ಪೋಸ್ಟ್ ಸರಿಯೆನಿಸುತ್ತಿಲ್ಲ” ಎಂದು ಮತ್ತೊಬ್ಬ ಬಳಕೆದಾರರು ಬುದ್ಧಿಮಾತು ಹೇಳಿದ್ದಾರೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಿರುವವರು ತಮ್ಮ ವೇದಿಕೆಗಳನ್ನು ಜವಾಬ್ದಾರಿಯಿಂದ ಬಳಸಬೇಕು ಎಂಬ ಚರ್ಚೆಯನ್ನೂ ಇದು ಹುಟ್ಟುಹಾಕಿದೆ.
ಈ ಎಲ್ಲಾ ವಿವಾದಗಳ ನಡುವೆಯೂ, ಬಹುನಿರೀಕ್ಷಿತ ಕನ್ನಡ ಆಕ್ಷನ್-ಥ್ರಿಲ್ಲರ್ ‘ದಿ ಡೆವಿಲ್’ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಇದೊಂದು ಸೇಡು ಮತ್ತು ಪ್ರೇಮಕಥೆಯ ಹೈ-ವೋಲ್ಟೇಜ್ ಸಿನಿಮಾ ಎನ್ನಲಾಗಿದೆ.






