ಬೆಳಗಾವಿ: ಗಂಡ-ಹೆಂಡತಿ ನಡುವಿನ ಸಂಘರ್ಷಕ್ಕೆ ತಂದೆಯನ್ನು ಕಳೆದುಕೊಂಡು ತಬ್ಬಲಿಯಾದ ಬಾಲಕಿಯೊಬ್ಬಳು, ತನ್ನ ತಂದೆಯ ಕೊಲೆಗೆ ನ್ಯಾಯ ಕೊಡಿಸಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwara) ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆ ಸುವರ್ಣ ವಿಧಾನ ಸೌಧದಲ್ಲಿ (Suvarna Soudha)ನಡೆದಿದೆ.
ಕಳೆದ ಡಿಸೆಂಬರ್ 12ರಂದು ವಿಜಯಪುರ ಜಿಲ್ಲೆಯ ಸಂಗಾಪುರ ಎಚ್.ಎಸ್. ಗ್ರಾಮದಲ್ಲಿ ಶಂಕಪ್ಪ ಕುರುಬರ್ ಎಂಬುವವರು ಕೊಲೆಯಾಗಿದ್ದರು. ಈ ಕೊಲೆಯನ್ನು ಮೃತನ ಪತ್ನಿ ಮಲ್ಲಮ್ಮ ಎಂಬಾಕೆಯೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ, ಈ ಕೊಲೆಯಲ್ಲಿ ಮಲ್ಲಮ್ಮ ಮಾತ್ರವಲ್ಲದೆ ಇನ್ನು ಮೂವರು ಭಾಗಿಯಾಗಿದ್ದಾರೆ ಎಂಬುದು ಮೃತನ ಕುಟುಂಬಸ್ಥರ ಗಂಭೀರ ಆರೋಪವಾಗಿದೆ.
ಕೊಲೆ ನಡೆದ ಸಮಯದಲ್ಲಿ ಪೊಲೀಸರು ಮಲ್ಲಮ್ಮನ ಜೊತೆಗೆ ಇತರ ಮೂವರನ್ನು ವಶಕ್ಕೆ ಪಡೆದಿದ್ದರು. ಆದರೆ, ರಾಜಕೀಯ ಪ್ರಭಾವ ಅಥವಾ ಇತರ ಒತ್ತಡಗಳಿಗೆ ಮಣಿದ ಪೊಲೀಸರು ಆ ಮೂವರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಶಂಕಪ್ಪ ಅವರ ಕುಟುಂಬಸ್ಥರು ಗೃಹ ಸಚಿವರಿಗೆ ದೂರಿದ್ದಾರೆ. ನೈಜ ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗೃಹ ಸಚಿವರ ಭರವಸೆ:
ಬಾಲಕಿ ಮತ್ತು ಕುಟುಂಬಸ್ಥರ ಅಳಲನ್ನು ಆಲಿಸಿದ ಗೃಹ ಸಚಿವ ಪರಮೇಶ್ವರ್ (Home Minister Dr. G. Parameshwara)ಅವರು ತಕ್ಷಣ ಸ್ಪಂದಿಸಿದರು. ವಿಜಯಪುರ ಎಸ್ಪಿಗೆ (SP) ಈ ಬಗ್ಗೆ ಸೂಕ್ತ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ತಮ್ಮ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.






