ಮೈಸೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ಆರೋಪದ ತನಿಖೆ ಈಗ ಅಂತಿಮ ಹಂತಕ್ಕೆ ತಲುಪಿದೆ. ನ್ಯಾಯಾಲಯ ನೀಡಿದ್ದ ಗಡುವಿನ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ತನಿಖಾ ವರದಿಯನ್ನು ಸಲ್ಲಿಸಲಿದ್ದಾರೆ.
ಲೋಕಾಯುಕ್ತ ಎಸ್ಪಿ ಉದೇಶ್ (Lokayukta SP Udesh)ಅವರು ಈಗಾಗಲೇ 50 ಪುಟಗಳ ಹೆಚ್ಚುವರಿ ವರದಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿಂದೆ ಸಲ್ಲಿಸಲಾಗಿದ್ದ 900ಕ್ಕೂ ಹೆಚ್ಚು ಪುಟಗಳ ವರದಿಯ ಮುಂದುವರಿದ ಭಾಗವಾಗಿ ಈ ರಿಪೋರ್ಟ್ ಸಲ್ಲಿಕೆಯಾಗಲಿದೆ(Report Submission).
ಜೈಲಿನಲ್ಲಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿದ್ದು, ಆ ಮಾಹಿತಿಗಳೂ ಈ ವರದಿಯಲ್ಲಿವೆ. ಹಗರಣದಲ್ಲಿ ಯಾರ ಪಾತ್ರವೇನು? ನಿಯಮಗಳ ಉಲ್ಲಂಘನೆ ಹೇಗೆ ನಡೆದಿದೆ? ಎಂಬ ಸಂಪೂರ್ಣ ವಿವರಗಳನ್ನು ಲೋಕಾಯುಕ್ತ ಅಧಿಕಾರಿಗಳು ಕಲೆಹಾಕಿದ್ದಾರೆ. ಹಾಗೂ ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಮತ್ತಷ್ಟು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಬಳಿ ಹೆಚ್ಚಿನ ಸಮಯ ಕೇಳುವ ಸಾಧ್ಯತೆಯಿದೆ.
ಪ್ರಕರಣದ ಹಿನ್ನೆಲೆ:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೊದಲ ಆರೋಪಿ (A1) ಆಗಿದ್ದು, ಅವರ ಪತ್ನಿ ಪಾರ್ವತಿ (A2), ಬಾಮೈದ ಮಲ್ಲಿಕಾರ್ಜುನಸ್ವಾಮಿ (A3) ಹಾಗೂ ದೇವರಾಜು (A4) ಆರೋಪಿಗಳಾಗಿದ್ದಾರೆ. ಡಿಸೆಂಬರ್ 18ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ಗಡುವು ವಿಧಿಸಿತ್ತು.






