ಹೈದರಾಬಾದ್ : ಪ್ರೀತಿಸಿ ಮದುವೆಯಾದವಳು ಸಂಕಷ್ಟದಲ್ಲಿದ್ದಾಗ ಆಸರೆಯಾಗಬೇಕಿದ್ದ ಪತಿಯೇ ವರದಕ್ಷಿಣೆ (Dowry ) ಹಣದ ವ್ಯಾಮೋಹಕ್ಕೆ ಬಿದ್ದು ಹೆಂಡತಿಯನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಅಮಾನುಷ ಘಟನೆ ತೆಲಂಗಾಣದ (Telangana) ವಿಕಾರಾಬಾದ್ನಲ್ಲಿ ನಡೆದಿದೆ. ಕೇವಲ ಎಂಟು ತಿಂಗಳ ದಾಂಪತ್ಯ ಹಸಿಹಸಿಯಾಗಿರುವಾಗಲೇ 22 ವರ್ಷದ ಅನುಷಾ ಎಂಬ ಯುವತಿ ಪತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ.
ಅನುಷಾ ಮತ್ತು ಪರಮೇಶ್ ಕುಮಾರ್ ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಹಿರಿಯರ ಸಮ್ಮತಿಯೊಂದಿಗೆ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪರಮೇಶ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ವರದಕ್ಷಿಣೆಗಾಗಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತು ಅನುಷಾ (Anusha) ಎರಡು ದಿನಗಳ ಹಿಂದಷ್ಟೇ ತವರು ಮನೆಗೆ ತೆರಳಿದ್ದರು.
ಇನ್ನು ಮುಂದೆ ಗಲಾಟೆ ಮಾಡುವುದಿಲ್ಲ ಎಂದು ನಂಬಿಸಿದ ಪರಮೇಶ್, ಅನುಷಾಳನ್ನು ತವರು ಮನೆಯಿಂದ ಮರಳಿ ಕರೆತಂದಿದ್ದಾನೆ. ಆದರೆ ಮನೆಗೆ ತಲುಪುತ್ತಿದ್ದಂತೆಯೇ ಬೈಕ್ನಿಂದ ಇಳಿಸಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಅನುಷಾಳ ಹೊಟ್ಟೆಗೆ ಒದ್ದು, ದೊಣ್ಣೆಯಿಂದ ಸತತ ಆರು ಬಾರಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ಭೀಕರ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅನುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅನುಷಾಳ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪರಮೇಶ್ ಮತ್ತು ಆತನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಣದಾಸೆಗಾಗಿ ಹೂವಿನಂತಹ ಹೆಣ್ಣನ್ನು ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.






