ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (MM Hills Wildlife Sanctuary) ಹುಲಿಯೊಂದನ್ನು ಕೊಂದು ಅದನ್ನು ಮೂರು ಭಾಗಗಳನ್ನಾಗಿ ಕತ್ತರಿಸಿ ಹಾಕಿದ್ದ ಕ್ರೂರ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹೈ-ವೋಲ್ಟೇಜ್ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾವಿನ ರಹಸ್ಯವನ್ನು ಬಯಲು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ (Pacchedoddi) ಗ್ರಾಮದ ಬಳಿ ನಡೆದಿದ್ದ ಈ ಕೃತ್ಯದ ಹಿಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹುಲಿಯ ದೇಹದ ಭಾಗಗಳ ಆಸೆ ಇರುವುದು ದೃಢಪಟ್ಟಿದೆ.
ಕೇವಲ ಹುಲಿಯ ಉಗುರುಗಳು (Claws) ಮತ್ತು ಹಲ್ಲುಗಳಿಗಾಗಿ (Teeth) ಕಿಡಿಗೇಡಿಗಳು ಹುಲಿಯನ್ನು ಬೇಟೆಯಾಡಿ ಹತ್ಯೆ ಮಾಡಿದ್ದಾರೆ. ಹುಲಿಯನ್ನು ಕೊಂದ ಬಳಿಕ ಅದನ್ನು ಮೂರು ತುಂಡುಗಳನ್ನಾಗಿ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಕಂಡುಬಂದಿದೆ.
ವರದಿ ಬಹಿರಂಗಕ್ಕೆ ಶಾಸಕರ ತಾಕೀತು:
ಈ ಸಭೆಯಲ್ಲಿ ಭಾಗವಹಿಸಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಕೃಷ್ಣಮೂರ್ತಿ (MLA Krishnamurthy) ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. “ಹುಲಿಗಳ ಸಾವಿನ ಕುರಿತು ಸಂಪೂರ್ಣ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಈ ಹತ್ಯೆಯ ಹಿಂದೆ ಯಾರಿದ್ದಾರೆ ಮತ್ತು ಇಲಾಖೆಯ ನಿರ್ಲಕ್ಷ್ಯವಿದೆಯೇ ಎಂಬುದು ಜನರಿಗೆ ತಿಳಿಯಬೇಕು” ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಹುಲಿಗಳ ರಕ್ಷಣೆಯಲ್ಲಿ ಎಡವುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.






