ಬೆಂಗಳೂರು : ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ಜಯದೇವ ಆಸ್ಪತ್ರೆಯ ಸಿಬ್ಬಂದಿ ನರ್ಸ್ ಒಬ್ಬರನ್ನು ಅವರ ಪ್ರಿಯಕರನೇ ಕತ್ತು ಸೀಳಿ ಬರ್ಬರವಾಗಿ ಕೊ*ಲೆ ಮಾಡಿರುವ ಘಟನೆ ನಡೆದಿದೆ. ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಆತಂಕಗೊಂಡ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಮೃತಪಟ್ಟವರನ್ನು ಮಮತಾ (39) ಎಂದು ಗುರಿತಿಸಲಾಗಿದೆ. ಈಕೆ ಜಯದೇವ ಆಸ್ಪತ್ರೆಯಲ್ಲಿ(Jayadeva Hospital) ಸ್ಟಾಫ್ ನರ್ಸ್(Nurse) ಆಗಿ ಕಾರ್ಯನಿರ್ವಹಿಸುತ್ತ, ಸ್ನೇಹಿತೆಯೊಂದಿಗೆ ಬಾಡಿಗೆ ಮನೆಯಲ್ಲಿದ್ದರು. ಡಿಸೆಂಬರ್ 24ರಂದು ಸ್ನೇಹಿತೆ ಊರಿಗೆ ತೆರಳಿದ್ದರಿಂದ ಮಮತಾ ಮನೆಯಲ್ಲಿ ಒಬ್ಬರೇ ಇದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕಿದ್ದ ಸುಧಾಕರ್ ಎಂಬಾತ, ರಾತ್ರಿ ಮನೆಗೆ ನುಗ್ಗಿ ಚಾಕುವಿನಿಂದ ಕತ್ತು ಸೀಳಿ ಪರಾರಿಯಾಗಿದ್ದನು
ಕೊಲೆಗೆ ಕಾರಣವೇನು?
ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಮಮತಾ (Mamatha) ತನಗಿಂತ ವಯಸ್ಸಿನಲ್ಲಿ ಹಿರಿಯವಳು ಎಂಬ ವಿಚಾರ ಸುಧಾಕರ್ನಿಗೆ ತಡವಾಗಿ ತಿಳಿದಿತ್ತು. ಇತ್ತೀಚೆಗೆ ಆರೋಪಿಗೆ ಮನೆಯವರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಇದರಿಂದ ಕೆರಳಿದ ಮಮತಾ, ತನ್ನನ್ನೇ ಮದುವೆಯಾಗುವಂತೆ ಸುಧಾಕರ್ ಮೇಲೆ ಒತ್ತಡ ಹೇರಿದ್ದರು.
ಒಂದು ವೇಳೆ ಮದುವೆಯಾಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಗೂ ನಿನ್ನ ಕುಟುಂಬವನ್ನು ಕೇಸಿನಲ್ಲಿ ಸಿಲುಕಿಸುವುದಾಗಿ ಮಮತಾ ಎಚ್ಚರಿಕೆ ನೀಡಿದ್ದರು. ಈ ಆತಂಕದಿಂದ ಪಾರಾಗಲು ಕೊಲೆ ಸಂಚು ರೂಪಿಸಿದ್ದನು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಕುರಿಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.






