ಕಾರವಾರ: ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಖ್ಯಾತಿಯ ಕಾರವಾರದ ‘ಕದಂಬ ನೌಕಾನೆಲೆ’ (Kadamba Naval Base) ಇಂದು ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಇಂದು ನೌಕಾನೆಲೆಗೆ ಭೇಟಿ ನೀಡಲಿದ್ದು, ಜಲಾಂತರ್ಗಾಮಿ ಯುದ್ಧನೌಕೆಯೊಳಗೆ (Submarine) ಕುಳಿತು ಸಮುದ್ರದಾಳದಲ್ಲಿ ಸಂಚರಿಸಲಿದ್ದಾರೆ. ಈ ಮೂಲಕ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಶನಿವಾರವೇ ನವದೆಹಲಿಯಿಂದ ಗೋವಾಗೆ ಆಗಮಿಸಿರುವ ರಾಷ್ಟ್ರಪತಿಗಳು, ಇಂದು ಬೆಳಿಗ್ಗೆ 10 ಗಂಟೆಗೆ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಕಾರವಾರದ ಅರಗಾ ನೌಕಾನೆಲೆಗೆ ಆಗಮಿಸಲಿದ್ದಾರೆ. ಅಲ್ಲಿ ನೌಕಾಪಡೆಯಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ, ಸ್ವದೇಶಿ ನಿರ್ಮಿತ ವಿಮಾನ ಯುದ್ಧನೌಕೆ ‘ಐಎನ್ಎಸ್ ವಿಕ್ರಾಂತ್’ಗೆ (INS Vikrant) ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಜಲಾಂತರ್ಗಾಮಿಯ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲು ಸಮುದ್ರದ ಆಳದಲ್ಲಿ ಪ್ರಯಾಣ ಬೆಳೆಸಲಿದ್ದಾರೆ.

ಕಲಾಂ ದಾಖಲೆ ನೆನಪಿಸಿದ ಮುರ್ಮು:
ಈ ಹಿಂದೆ 2006ರಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ‘ಐಎನ್ಎಸ್ ಸಿಂಧು ರಕ್ಷಕ್’ ಮೂಲಕ ಪ್ರಯಾಣಿಸಿ, ಜಲಾಂತರ್ಗಾಮಿಯಲ್ಲಿ ಸಂಚರಿಸಿದ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದರು. ಈಗ ಮುರ್ಮು ಅವರು ಆ ಸಾಲಿಗೆ ಸೇರ್ಪಡೆಯಾಗಲಿದ್ದು, ಮೊದಲ ಮಹಿಳಾ ರಾಷ್ಟ್ರಪತಿ ಎಂಬ ದಾಖಲೆ ಬರೆಯಲಿದ್ದಾರೆ. ಈಗಾಗಲೇ ಸುಖೋಯ್-30 ಮತ್ತು ರಫೇಲ್ ಯುದ್ಧವಿಮಾನಗಳಲ್ಲಿ ಹಾರಾಟ ನಡೆಸಿರುವ ಮುರ್ಮು, ಈಗ ಸಮುದ್ರದಾಳದ ಸಾಹಸಕ್ಕೆ ಸಜ್ಜಾಗಿದ್ದಾರೆ.
ಮೀನುಗಾರಿಕೆ ನಿಷೇಧ, ನೌಕರರಿಗೆ ರಜೆ:
ರಾಷ್ಟ್ರಪತಿಗಳ ಭದ್ರತೆಯ ಹಿತದೃಷ್ಟಿಯಿಂದ ಇಂದು (ಭಾನುವಾರ) ಮಧ್ಯಾಹ್ನ 3.30ರವರೆಗೆ ಕಾರವಾರದ ಮಾಜಾಳಿಯಿಂದ ಹಾರಾವಾಡದವರೆಗಿನ ಕಡಲತೀರದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಮತ್ತು ಸಿವಿಲಿಯನ್ ನೌಕರರಿಗೆ ರಜೆ ಘೋಷಿಸಲಾಗಿದ್ದು, ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.






