ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇಳೆ ಭೀಕರ ಸುಂಟರಗಾಳಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮದ ಪೆಂಡಾಲ್ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಮೇಲೆಯೇ ಕುಸಿಯುವ ಹಂತಕ್ಕೆ ತಲುಪಿತ್ತು. ಅದೃಷ್ಟವಶಾತ್ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ :
ಸಚಿವ ಸತೀಶ್ ಜಾರಕಿಹೊಳಿ ಅವರು ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ(Ambedkar Statue Ranebennur) , ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಧೂಳು ಮಿಶ್ರಿತ ಭಾರಿ ಸುಂಟರಗಾಳಿ ಬೀಸಿದೆ. ಗಾಳಿಯ ವೇಗಕ್ಕೆ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ಬುಡಸಹಿತ ಕಿತ್ತುಬಂದಿದೆ.
ಪೆಂಡಾಲ್ ಸಚಿವರ ತಲೆಯ ಮೇಲೆಯೇ ಬೀಳುವ ಕ್ಷಣದಲ್ಲಿ ಅಂಗರಕ್ಷಕರು ಮತ್ತು ಬೆಂಬಲಿಗರು ಜಾಗರೂಕರಾಗಿದ್ದು ಸಚಿವರನ್ನು ಸುರಕ್ಷಿತವಾಗಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಪೆಂಡಾಲ್ ಸಂಪೂರ್ಣವಾಗಿ ನೆಲಸಮವಾಗಿದ್ದು, ಸ್ಥಳದಲ್ಲಿದ್ದವರು ಕೆಲಕಾಲ ಆತಂಕಕ್ಕೊಳಗಾದರು.






