Home State Politics National More
STATE NEWS

​HighCommand ಮೇಲೆ ಭರವಸೆ, ಪೂರ್ಣಾವಧಿ ವಿಶ್ವಾಸ – ಅರಸು ದಾಖಲೆ ಬೆನ್ನಲ್ಲೇ ಮನದಾಸೆ ಬಿಚ್ಚಿಟ್ಟ CM ಸಿದ್ದರಾಮಯ್ಯ!

Cm siddaramaiah confident of full term matches dev
Posted By: Sagaradventure
Updated on: Jan 6, 2026 | 8:16 AM

​ಮೈಸೂರು: ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿಎಂ ಸಿದ್ದರಾಮಯ್ಯ, ಇದೀಗ ಪೂರ್ಣಾವಧಿ (5 ವರ್ಷ) ಆಡಳಿತ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತವರು ಜಿಲ್ಲೆ ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯದ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.

ದಾಖಲೆ ಬಗ್ಗೆ ಅರಿವಿರಲಿಲ್ಲ: ಅರಸು ಅವರ ದಾಖಲೆ ಸರಿಗಟ್ಟಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಅರಸು ಅವರ ರಾಜಕಾರಣದ ಸಮಯವೇ ಬೇರೆ, ಇಂದಿನ ಸಮಯವೇ ಬೇರೆ. ಕೇವಲ ಒಂದು ಬಾರಿ ಶಾಸಕನಾದರೆ ಸಾಕು ಎಂದು ರಾಜಕೀಯಕ್ಕೆ ಬಂದವನು ನಾನು. ಜನರ ಆಶೀರ್ವಾದದಿಂದ ಡಿಸಿಎಂ, ಸಿಎಂ ಆಗಿ ದಾಖಲೆಯ ಬಜೆಟ್ ಮಂಡಿಸುವಂತಾಯಿತು. ಇಲ್ಲಿವರೆಗಿನ ರಾಜಕೀಯ ಜೀವನ ತೃಪ್ತಿ ತಂದಿದೆ” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಪೂರ್ಣಾವಧಿ ಸಿಎಂ ಆಸೆ: ಮುಂದಿನ ಅವಧಿಯ ಬಗ್ಗೆ ಮಾತನಾಡಿದ ಅವರು, “ನನಗೆ ಹೈಕಮಾಂಡ್ ಮೇಲೆ ಸಂಪೂರ್ಣ ನಂಬಿಕೆಯಿದೆ ಮತ್ತು ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವೂ ಇದೆ. ಏನೇ ಆದರೂ ಹೈಕಮಾಂಡ್ ತೀರ್ಮಾನವೇ ಅಂತಿಮ” ಎಂದು ಪುನರುಚ್ಚರಿಸುವ ಮೂಲಕ ಪೂರ್ಣಾವಧಿ ಅಧಿಕಾರ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದರು.

​ನಾಟಿ ಕೋಳಿ ಪಲಾವ್ ಮತ್ತು ಸಂಪುಟ ಚರ್ಚೆ:

ಅಭಿಮಾನಿಗಳು ತಮ್ಮ ಹೆಸರಿನಲ್ಲಿ ‘ನಾಟಿ ಕೋಳಿ ಪಲಾವ್’ ಹಂಚುತ್ತಿರುವ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾನು ಹಳ್ಳಿಯವನು, ಸಹಜವಾಗಿ ನಾಟಿ ಕೋಳಿ ಇಷ್ಟ. ಆದರೆ ಈಗ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ” ಎಂದರು. ಇದೇ ವೇಳೆ, ಕೆ.ಸಿ. ವೇಣುಗೋಪಾಲ್ ಭೇಟಿ ಸೌಹಾರ್ದಯುತವಾಗಿತ್ತೇ ಹೊರತು, ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸಂಕ್ರಾಂತಿ ನಂತರ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಸ್ಪಷ್ಟಪಡಿಸಿದರು. ಬಳ್ಳಾರಿ ಗಲಾಟೆ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿದ್ದು, ಸಿಒಡಿ ತನಿಖೆಗೆ ನೀಡುವ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

Shorts Shorts