ಬೆಂಗಳೂರು: ಮುಂಬರುವ ಐಪಿಎಲ್ (IPL) ಪಂದ್ಯಾವಳಿಯನ್ನು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿಯೇ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಕ್ರೀಡಾಂಗಣದ ಭದ್ರತಾ ಲೋಪಗಳ ಕುರಿತು ನ್ಯಾಯಮೂರ್ತಿ ನಾ. ಕುನ್ಹಾ ಆಯೋಗ ನೀಡಿದ್ದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಸ್ಸಿಎ, ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗಿದೆ.
ಮಾರ್ಚ್ ತಿಂಗಳಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಕ್ರೀಡಾಂಗಣವನ್ನು ಸರ್ವಸನ್ನದ್ಧಗೊಳಿಸಲು ಕೆಎಸ್ಸಿಎ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಭದ್ರತಾ ಲೋಪಗಳನ್ನು ಸರಿಪಡಿಸಲು ಒಂದು ತಿಂಗಳ ಗಡುವು ಹಾಕಿಕೊಳ್ಳಲಾಗಿದ್ದು, ಕಾಮಗಾರಿಗಳು ಭರದಿಂದ ಸಾಗಿವೆ.
ಏನೇನು ಬದಲಾವಣೆ?:
ಕುನ್ಹಾ ಆಯೋಗದ ಶಿಫಾರಸಿನನ್ವಯ ಪ್ರಮುಖವಾಗಿ ಪ್ರೇಕ್ಷಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ದ್ವಾರಗಳ ವಿಸ್ತರಣೆ: ಕ್ರೀಡಾಂಗಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು (Entry & Exit Gates) ವಿಸ್ತರಣೆ ಮಾಡುವ ಕೆಲಸ ಆರಂಭವಾಗಿದೆ. ಇದರಿಂದ ನೂಕುನುಗ್ಗಲು ತಡೆಯಲು ಸಾಧ್ಯವಾಗಲಿದೆ.
ತುರ್ತು ವಾಹನಗಳಿಗೆ ದಾರಿ: ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಮೈದಾನದ ಒಳಗೆ ಮತ್ತು ಹೊರಗೆ ಚಲಿಸಲು ಪ್ರತ್ಯೇಕ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಕಾರಿಡಾರ್ ಸುಧಾರಣೆ: ಕ್ರೀಡಾಂಗಣದ ಆಂತರಿಕ ಸಂಚಾರ ಕಾರಿಡಾರ್ಗಳನ್ನು ಸುಧಾರಿಸಲು ಮತ್ತು ಜನಸಂದಣಿಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ.
ಐಪಿಎಲ್ ಆರಂಭವಾಗಲು ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ, ಕೆಎಸ್ಸಿಎ ಹಗಲಿರುಳು ಶ್ರಮಿಸಿ ಕ್ರೀಡಾಂಗಣದ ರೂಪ ಬದಲಿಸಲು ಮುಂದಾಗಿದೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಸುರಕ್ಷಿತ ವಾತಾವರಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಕಲ್ಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.






