ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಹಾಗೂ ಇತರರಿಗೆ ಮನೆ ಊಟ ನೀಡಲು ಕೋರ್ಟ್ ಸೂಚನೆ ನೀಡಿದ್ದರೂ, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು (Prison Officials) ಮಾತ್ರ ಇದಕ್ಕೆ ಸ್ಪಷ್ಟ ನಿರಾಕರಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮನೆ ಊಟ ನೀಡದಿರಲು ಕಾರಣಗಳನ್ನು ಪಟ್ಟಿ ಮಾಡಿ ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್ ಅವರು, “ಜೈಲಿನ ಊಟದಿಂದ ನಮ್ಮ ಆರೋಗ್ಯ ಕೆಡುತ್ತಿದೆ, ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡಬೇಕು” ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಜೈಲಿನ ನಿಯಮಾವಳಿಗಳಿಗೆ ಒಳಪಟ್ಟು ಮನೆ ಊಟ ಒದಗಿಸುವಂತೆ ಸೂಚಿಸಿತ್ತು. ಆದರೆ, ಈಗ ಅದೇ ನಿಯಮಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಊಟ ನಿರಾಕರಿಸಿದ್ದಾರೆ.
ಊಟ ನಿರಾಕರಿಸಲು ಜೈಲು ಅಧಿಕಾರಿಗಳು ನೀಡುತ್ತಿರುವ 3 ಪ್ರಮುಖ ಕಾರಣಗಳು:
- ಕಾರಾಗೃಹ ಕಾಯ್ದೆ ಅಡ್ಡಿ: ಕಾರಾಗೃಹ ಇಲಾಖೆ ಕಾಯ್ದೆ ಸೆಕ್ಷನ್ 13ರ ಅಡಿಯಲ್ಲಿ (Prison Act Section 13) ಸಾಮಾನ್ಯ ಕೈದಿಗಳಿಗೆ ಹೊರಗಿನಿಂದ ಊಟ ತರಿಸಿಕೊಡಲು ಅವಕಾಶವಿಲ್ಲ.
- ಗುಣಮಟ್ಟದ ಪ್ರಮಾಣಪತ್ರ: ಜೈಲಿನಲ್ಲಿ ನೀಡಲಾಗುವ ಊಟ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳೇ ಖುದ್ದು ಪರಿಶೀಲಿಸಿ ವರದಿ ನೀಡಿದ್ದಾರೆ. ಹೀಗಾಗಿ ಆರೋಗ್ಯದ ನೆಪ ಹೇಳುವಂತಿಲ್ಲ.
- ತಾರತಮ್ಯದ ಪ್ರಶ್ನೆ: ಈ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ, ಜೈಲಿನಲ್ಲಿರುವ ಸಾವಿರಾರು ವಿಚಾರಣಾಧೀನ ಕೈದಿಗಳು ಇದೇ ಬೇಡಿಕೆ ಇಟ್ಟು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ. ಇದು ಜೈಲಿನ ಶಿಸ್ತು ಮತ್ತು ನಿರ್ವಹಣೆಗೆ ಸಮಸ್ಯೆಯಾಗಲಿದೆ.
ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ, ಪವಿತ್ರಾ ಗೌಡ ಸೇರಿದಂತೆ ಮೂವರಿಗೂ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಸಂಬಂಧ ಬುಧವಾರ ಅಥವಾ ಗುರುವಾರ ಕೋರ್ಟ್ಗೆ ಲಿಖಿತ ಆಕ್ಷೇಪಣೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.






