ರಾಮನಗರ : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Big Boss) ಮತ್ತು ಅದರ ನಿರೂಪಕ ನಟ ಕಿಚ್ಚ ಸುದೀಪ್ (Kiccha Sudeep) ವಿರುದ್ಧ ರಾಮನಗರದ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದಾರೆ ಎಂಬುದು ದೂರಿನ ಮುಖ್ಯ ಆರೋಪ.
ಏನಿದು ವಿವಾದ?
ಇತ್ತೀಚಿನ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಯೊಬ್ಬರ ಆಟದ ವೈಖರಿಯನ್ನು ವಿವರಿಸುವಾಗ ಸುದೀಪ್ ಅವರು, “ರಣಹದ್ದು ರೀತಿ ಹೊಂಚುಹಾಕಿ, ಸಂಚು ಮಾಡಿ ಕರೆಕ್ಟ್ ಟೈಮಿಗೆ ಹಿಡಿಯುವುದು” ಎಂಬ ಪದಗಳನ್ನು ಬಳಸಿದ್ದರು.
ಈ ಹೇಳಿಕೆಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಣಹದ್ದುಗಳು ಯಾವುದೇ ಜೀವಂತ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ ಅಥವಾ ಹೊಂಚುಹಾಕಿ ಹಿಡಿಯುವುದಿಲ್ಲ. ಅವು ಕೇವಲ ಸತ್ತ ಪ್ರಾಣಿಗಳನ್ನು ತಿಂದು ಪರಿಸರವನ್ನು ಸ್ವಚ್ಛವಾಗಿಡುವ ಕೆಲಸ ಮಾಡುತ್ತವೆ.
ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಬಗ್ಗೆ ಇಂತಹ ತಪ್ಪು ಮಾಹಿತಿಯನ್ನು ಕೋಟ್ಯಂತರ ಜನರು ನೋಡುವ ವೇದಿಕೆಯಲ್ಲಿ ನೀಡುವುದರಿಂದ ಅವುಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ರಾಮನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಮತ್ತು ವಲಯ ಅರಣ್ಯಾಧಿಕಾರಿಗಳಿಗೆ (RFO) ಟ್ರಸ್ಟ್ ಲಿಖಿತ ದೂರನ್ನು ಸಲ್ಲಿಸಿದೆ. ಪರಿಸರ ಸಮತೋಲನ ಕಾಪಾಡುವ ರಣಹದ್ದುಗಳ ಘನತೆಗೆ ಕುಂದು ತರುವಂತಹ ಹೇಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.






