ರಾಜಧಾನಿ ಬೆಂಗಳೂರಿನಲ್ಲಿ ಎಲ್ಪಿಜಿ (LPG) ಸಿಲಿಂಡರ್ ಕೊರತೆಯ ಆತಂಕ ನಿಧಾನವಾಗಿ ತಣ್ಣಗಾಗುತ್ತಿದೆ. ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಆತಂಕಗೊಂಡು ಮುಂಚಿತವಾಗಿಯೇ ಗ್ಯಾಸ್ ಕಾಯ್ದಿರಿಸುವ ‘ಪ್ಯಾನಿಕ್ ಬುಕ್ಕಿಂಗ್’ ಪ್ರಮಾಣ ಕೂಡ ಕಡಿಮೆಯಾಗಿದೆ.
ಕೇಂದ್ರ ಸರ್ಕಾರದ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಪಿಟಿಐ ವರದಿಯ ಪ್ರಕಾರ, ದೇಶಾದ್ಯಂತ ದೈನಂದಿನ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಪ್ರಮಾಣ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದೆ. ಮೊದಲೆಲ್ಲಾ ಬುಕ್ಕಿಂಗ್ ಹಾಗೂ ಡೆಲಿವರಿಗಾಗಿ ಗ್ಯಾಸ್ ಏಜೆನ್ಸಿಗಳ ಬಳಿ ಡಜನ್ಗಟ್ಟಲೆ ಜನರು ಜಮಾಯಿಸುತ್ತಿದ್ದರೆ, ಇದೀಗ ಆ ಸಂಖ್ಯೆ 15-20 ಕ್ಕೆ ಸೀಮಿತವಾಗಿದೆ.
ವಿತರಣೆಯಲ್ಲಿ ಇಂಡೇನ್, ಭಾರತ್ ಗ್ಯಾಸ್ ಮುಂದು; ಹೆಚ್ಪಿ ವಿಳಂಬ
ಗ್ರಾಹಕರು ನೀಡಿರುವ ಮಾಹಿತಿಯ ಪ್ರಕಾರ, ಇಂಡೇನ್ (Indane) ಮತ್ತು ಭಾರತ್ ಗ್ಯಾಸ್ (Bharatgas) ಕಂಪನಿಗಳು ತುಲನಾತ್ಮಕವಾಗಿ ವೇಗವಾಗಿ ಸಿಲಿಂಡರ್ಗಳನ್ನು ಪೂರೈಸುತ್ತಿದ್ದರೆ, ಎಚ್ಪಿ (HP) ಗ್ಯಾಸ್ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿದೆ.
ರಾಜರಾಜೇಶ್ವರಿ ನಗರದ ಇಂಡೇನ್ ಗ್ರಾಹಕಿ ಲಕ್ಷ್ಮಿ ಆರ್. ಪ್ರತಿಕ್ರಿಯಿಸಿ, “ಆರಂಭದಲ್ಲಿ ಬುಕ್ಕಿಂಗ್ ಕನ್ಫರ್ಮೇಷನ್ ಸಿಗದೆ ಸ್ವಲ್ಪ ಗೊಂದಲವಿತ್ತು. ಆದರೆ ಆ ನಂತರ ಪೂರೈಕೆಯಲ್ಲಿ ನಮಗೆ ಯಾವುದೇ ಸಮಸ್ಯೆಯಾಗಿಲ್ಲ” ಎಂದಿದ್ದಾರೆ.
ಕೆಲವು ಎಚ್ಪಿ ಗ್ರಾಹಕರಿಗೆ 2-3 ದಿನಗಳಲ್ಲಿ ಸಿಲಿಂಡರ್ ಸಿಕ್ಕಿದ್ದರೆ, ಇನ್ನು ಕೆಲವರು ವಾರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಶ್ರೀನಿಧಿ ಅತ್ರೇಯ, “ನಮ್ಮದು ಮತ್ತು ನಮ್ಮ ಪಕ್ಕದ ಮನೆಯವರದ್ದು ಇಬ್ಬರದ್ದೂ ಎಚ್ಪಿ ಕನೆಕ್ಷನ್. ಅವರು ಮೂರು ದಿನಗಳ ಹಿಂದೆಯೇ ಸಿಲಿಂಡರ್ ಪಡೆದಿದ್ದಾರೆ. ಆದರೆ, ಅವರಿಗಿಂತ ಒಂದು ದಿನ ಮುಂಚಿತವಾಗಿ ಬುಕ್ ಮಾಡಿದ್ದರೂ ನಮಗೆ ಇನ್ನೂ ಸಿಲಿಂಡರ್ ಬಂದಿಲ್ಲ” ಎಂದು ವಿವರಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಬೆಲೆ ಏರಿಕೆ ಬಿಸಿ
ಒಂದೆಡೆ ಅಡುಗೆ ಎಣ್ಣೆ, ಮತ್ತೊಂದೆಡೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿರುವುದು ಬೀದಿಬದಿ ತಿನಿಸು ಮಾರುವ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಹಲವರು ತಮ್ಮ ತಿನಿಸುಗಳ ಬೆಲೆಯನ್ನು 5 ರೂ. ಗಳಿಂದ 10 ರೂ. ಗಳವರೆಗೆ ಹೆಚ್ಚಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಮೈಸೂರು ರಸ್ತೆಯಲ್ಲಿ ಎಗ್ ರೈಸ್ ಮಾರಾಟ ಮಾಡುವ ಅರುಣ್ ಗೌಡ, “ಅಡುಗೆ ಎಣ್ಣೆ ಹಾಗೂ ಗ್ಯಾಸ್ ರೇಟ್ ಹೆಚ್ಚಾಗಿರುವುದರಿಂದ ಪ್ರತಿ ಪ್ಲೇಟ್ ಎಗ್ ರೈಸ್ ಬೆಲೆಯನ್ನು 5 ರೂ. ಹೆಚ್ಚಿಸಿದ್ದೇನೆ. ರೇಟ್ ಏರಿಸದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರೇಸ್ ಕೋರ್ಸ್ ರಸ್ತೆ ಬಳಿ ಇಡ್ಲಿ ಮಾರುವ ಮುನಿರಾಜು ಸ್ವಾಮಿ ಪ್ರತಿಕ್ರಿಯಿಸಿ, “ವಿದೇಶದಿಂದ ಗ್ಯಾಸ್ ಹೊತ್ತ ಹಡಗುಗಳು ಭಾರತಕ್ಕೆ ಬರುತ್ತಿವೆ ಎಂದು ನಾವು ನ್ಯೂಸ್ನಲ್ಲಿ ನೋಡಿದ್ದೇವೆ. ಹೀಗಾಗಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸದಿಂದ ನಾವಿನ್ನೂ ಬೆಲೆ ಏರಿಸಿಲ್ಲ. ಒಂದು ವೇಳೆ ಈ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ರೇಟ್ ಜಾಸ್ತಿ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಹೇಳಿದ್ದಾರೆ.
