ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಭವಿಷ್ಯದ ಕುರಿತು ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ ಮತ್ತು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡುವೆ ಸೋಶಿಯಲ್ ಮೀಡಿಯಾದಲ್ಲಿ (X) ಭಾರೀ ಸಮರ ಏರ್ಪಟ್ಟಿದೆ. ಬಿಎಂಟಿಸಿ (BMTC) ಸೇವೆಯಲ್ಲಿ ಖಾಸಗಿ ಸಹಭಾಗಿತ್ವದ ಬಗ್ಗೆ ಪೈ ನೀಡಿದ ಹೇಳಿಕೆ ಈಗ ಆಡಳಿತಾರೂಢ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಏಕಸ್ವಾಮ್ಯವೇ ಬಸ್ ಕೊರತೆಗೆ ಕಾರಣ, ಹೀಗಾಗಿ ಖಾಸಗಿ ಬಸ್ಸುಗಳಿಗೂ ಅವಕಾಶ ನೀಡಬೇಕು ಎಂದು ಪೈ ವಾದ ಮಂಡಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು, ಸಾರ್ವಜನಿಕ ಸೇವೆಯನ್ನು ಕೇವಲ ಲಾಭದ ದೃಷ್ಟಿಯಿಂದ ನೋಡಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಲಾವಣ್ಯ ಬಲ್ಲಾಳ್ ಆಕ್ರೋಶ
ಈ ಚರ್ಚೆಗೆ ಧುಮುಕಿರುವ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷೆಯಾಗಿರುವ ಲಾವಣ್ಯ ಬಲ್ಲಾಳ್ ಜೈನ್, ಮೋಹನ್ ದಾಸ್ ಪೈ ಈಸ್ ಎನ್ ಈಡಿಯಟ್ ಎಂದು ಅವರ ವಿರುದ್ಧ ವೈಯಕ್ತಿಕವಾಗಿಯೂ ವಾಗ್ದಾಳಿ ನಡೆಸಿದ್ದಾರೆ. “ಬಿಎಂಟಿಸಿಯನ್ನು ಎಂದಿಗೂ ಖಾಸಗೀಕರಣಗೊಳಿಸಬಾರದು. ಖಾಸಗಿ ವ್ಯಕ್ತಿಗಳು ಬಂದರೆ ಸೇವಾ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ. ಟಿಕೆಟ್ ದರ ಏರಿಸುವುದು ಮತ್ತು ಲಾಭ ಬಾರದಿದ್ದರೆ ಅರ್ಧ ದಾರಿಯಲ್ಲೇ ಕೈಬಿಡುವುದು ಖಾಸಗಿಯವರ ಚಾಳಿ. ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಭಾರತದ ಬೆನ್ನೆಲುಬು” ಎಂದು ಹೇಳಿದ್ದಾರೆ. ಇಂಡಿಗೋ ವಿಮಾನಯಾನದ ಏಕಸ್ವಾಮ್ಯದ ಉದಾಹರಣೆಯನ್ನು ನೀಡುತ್ತಾ, ಮಧ್ಯಮ ವರ್ಗದ ಜನರಿಗೆ ಸರ್ಕಾರಿ ಬಸ್ಸುಗಳೇ ಆಸರೆ ಎಂದು ಲಾವಣ್ಯ ಪ್ರತಿಪಾದಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ 5,800 ಹೊಸ ಬಸ್ಗಳನ್ನು ಸೇರ್ಪಡೆ ಮಾಡಲಾಗಿದ್ದು, 2026ರ ಮಾರ್ಚ್ ವೇಳೆಗೆ ಇನ್ನೂ 2,000 ಬಸ್ಗಳು ರಸ್ತೆಗಿಳಿಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಆದರೂ, ಬೆಂಗಳೂರಿನ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ‘ ಸಮಸ್ಯೆಗೆ ಖಾಸಗೀಕರಣವೇ ಮದ್ದು ಎನ್ನುವ ವರ್ಗ ಮತ್ತು ಸಮಾಜ ಸೇವೆಯೇ ಮುಖ್ಯ ಎನ್ನುವ ಸರ್ಕಾರದ ನಡುವಿನ ಈ ಸೈದ್ಧಾಂತಿಕ ಸಂಘರ್ಷ ಮುಂದುವರಿದಿದೆ.
ಮೋಹನ್ ದಾಸ್ ಪೈ ವಾದವೇನು?
ಸಾರಿಗೆ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಆರೋಪಿಸಿದ್ದಾರೆ. “ಜನರಿಗೆ ಬೇಕಿರುವುದು ಸಮರ್ಪಕ ಸಾರಿಗೆ ವ್ಯವಸ್ಥೆಯೇ ಹೊರತು, ಅದನ್ನು ಯಾರು ಒದಗಿಸುತ್ತಾರೆ ಎಂಬುದು ಮುಖ್ಯವಲ್ಲ. ಸಾರಿಗೆ ಇಲಾಖೆಯು ಖಾಸಗಿ ನಿರ್ವಾಹಕರನ್ನು ತಡೆದು ನಿಲ್ಲಿಸುವ ಮೂಲಕ ಜನರ ಸಂಕಷ್ಟಕ್ಕೆ ಕಾರಣವಾಗಿದೆ” ಎಂದು ಪೈ ಟ್ವೀಟ್ ಮಾಡಿದ್ದರು. ಸರ್ಕಾರದ ಧೋರಣೆಯನ್ನು ‘ಮೊಂಡುತನ‘ ಎಂದು ಕರೆದ ಅವರು, ಖಾಸಗಿ ವಲಯದ ಪರಿಹಾರಗಳನ್ನು ತಿರಸ್ಕರಿಸುವ ಮೂಲಕ ನಾಗರಿಕರು ಪರದಾಡುವಂತಾಗಿದೆ ಎಂದು ಟೀಕಿಸಿದ್ದರು.
