ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕೊನೆಗೂ ರಾಜಭವನ ಮತ್ತು ಹೈಕಮಾಂಡ್ ಮಟ್ಟದಲ್ಲಿ ದಿನಾಂಕ ಹಾಗೂ ಮುಹೂರ್ತ ನಿಗದಿಯಾಗಿದೆ. ರಾಜ್ಯ ರಾಜಕಾರಣದ ಈ ಮಹತ್ವದ ಸುದೀರ್ಘ ಹೈಡ್ರಾಮಾಗೆ ತೆರೆ ಬಿದ್ದಿದ್ದು, ಮುಂಬರುವ ಬುಧವಾರ (ಜೂನ್ 3) ಸಂಜೆ 4:00 ಗಂಟೆಗೆ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನವರ ಮಾರ್ಗದರ್ಶನ ಹಾಗೂ ಸೂಚನೆಯ ಅನ್ವಯವೇ ಈ ಶುಭ ಮುಹೂರ್ತವನ್ನು ಅಂತಿಮಗೊಳಿಸಲಾಗಿದೆ ಎಂದು ಅವರ ಆಪ್ತ ವಲಯದ ಮೂಲಗಳು ಖಚಿತಪಡಿಸಿವೆ.
ವಿಧಾನಸೌಧದ ‘ಗ್ರ್ಯಾಂಡ್ ಸ್ಟೆಪ್ಸ್’ ಮೇಲೆ ಪಟ್ಟಾಭಿಷೇಕ!
ಸಾಮಾನ್ಯವಾಗಿ ರಾಜಭವನ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಇಂತಹ ಬೃಹತ್ ಸಮಾರಂಭಗಳು ನಡೆಯುತ್ತವೆ. ಆದರೆ, ಈ ಬಾರಿ ಅತ್ಯಂತ ವಿಶೇಷವಾಗಿ ಬೆಂಗಳೂರಿನ ಸಾಕ್ಷಿಪ್ರಜ್ಞೆ, ಶಕ್ತಿ ಸೌಧವಾದ ವಿಧಾನಸೌಧದ ಭವ್ಯ ಮೆಟ್ಟಿಲುಗಳ (Grand Steps) ಮೇಲೆ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಜರುಗಲಿದೆ. ಲಕ್ಷಾಂತರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಈ ಐತಿಹಾಸಿಕ ಕ್ಷಣಕ್ಕೆ ವಿಧಾನಸೌಧ ಸಾಕ್ಷಿಯಾಗಲಿದೆ.
ಜಂಟಿ ಸಂಪುಟ ರಚನೆ ಚರ್ಚೆ: ಮುಹೂರ್ತ ನಿಗದಿಯಾಗಿರುವ ಬೆನ್ನಲ್ಲೇ, ನೂತನ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ನೀಡಬೇಕು ಮತ್ತು ಉಪಮುಖ್ಯಮಂತ್ರಿ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಕುರಿತು ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರೊಂದಿಗೆ ಡಿ.ಕೆ. ಶಿವಕುಮಾರ್ ಹಾಗೂ ವೀಕ್ಷಕರು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಬುಧವಾರ ಸಂಜೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದು, ಇಡೀ ರಾಜ್ಯದ ಕಣ್ಣು ಈಗ ವಿಧಾನಸೌಧದತ್ತ ನೆಟ್ಟಿದೆ.
