ಕಾರವಾರ: ನಗರದ ಜಿಲ್ಲಾ ಕಾರಾಗೃಹದಲ್ಲಿ ಮಂಗಳೂರು ಮೂಲದ ವಿಚಾರಣಾಧೀನ ಕೈದಿಗಳ ಪುಂಡಾಟಿಕೆ ಮಿತಿಮೀರಿದೆ. ಜೈಲರ್ ಹಾಗೂ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಮಾಸುವ ಮುನ್ನವೇ, ಮಂಗಳವಾರ ಮಧ್ಯಾಹ್ನ ಮತ್ತೆ ಆರು ಮಂದಿ ಕೈದಿಗಳು ಜೈಲಿನಲ್ಲಿ ದಾಂಧಲೆ ನಡೆಸಿ ಟಿವಿ ಒಡೆದು ಹಾಕಿ ರಂಪಾಟ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆಯಿಂದಾಗಿ ಜೈಲು ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಕಾರಾಗೃಹದ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಮಂಗಳವಾರ ಮಧ್ಯಾಹ್ನದ ವೇಳೆ ಬ್ಯಾರಕ್ನಲ್ಲಿದ್ದ ಕುಖ್ಯಾತ ರೌಡಿಗಳಾದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಅವರ ಸಹಚರರೆಂದು ಗುರುತಿಸಲ್ಪಟ್ಟ ಆರು ಕೈದಿಗಳು ಏಕಾಏಕಿ ರೊಚ್ಚಿಗೆದ್ದಿದ್ದಾರೆ. ಜೈಲಿನಲ್ಲಿ ಅಳವಡಿಸಲಾಗಿದ್ದ ಟಿವಿಯನ್ನು ಒಡೆದು ಹಾಕಿದ್ದಲ್ಲದೆ, ಪೀಠೋಪಕರಣಗಳನ್ನು ಎಳೆದಾಡಿ, ಜೋರು ಧ್ವನಿಯಲ್ಲಿ ಕೂಗಾಡುತ್ತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕೇವಲ ಮೂರು ದಿನಗಳ ಹಿಂದಷ್ಟೇ ಜೈಲರ್ ಮೇಲೆ ಹಲ್ಲೆ ನಡೆದಿದ್ದರಿಂದ, ಈ ದಿಢೀರ್ ದಾಂಧಲೆಯನ್ನು ಕಂಡು ಜೈಲು ಸಿಬ್ಬಂದಿ ಕ್ಷಣಕಾಲ ಕಂಗಾಲಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಗಲಾಟೆಗೆ ಮುಖ್ಯ ಕಾರಣ ಮಂಗಳೂರು ಜೈಲಿನಿಂದ ಇತ್ತೀಚೆಗೆ ಸ್ಥಳಾಂತರಗೊಂಡಿರುವ ಕುಖ್ಯಾತ ಗ್ಯಾಂಗ್ ಎಂದು ತಿಳಿದುಬಂದಿದೆ. ದರೋಡೆ, ಹಫ್ತಾ ವಸೂಲಿ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಗ್ಯಾಂಗ್ನ ಸದಸ್ಯರನ್ನು, ಮಂಗಳೂರು ಜೈಲಿನಲ್ಲಿನ ದಟ್ಟಣೆ ಮತ್ತು ಅವರ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕಾರವಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ ಇಲ್ಲಿಯೂ ತಮ್ಮ ವರ್ಚಸ್ಸು ತೋರಿಸಲು ಮುಂದಾಗಿರುವ ಕೈದಿಗಳು ಜೈಲು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ವಿರುದ್ಧವೇ ಸಮರ ಸಾರಿದ್ದಾರೆ.
ಕಳೆದ ಭಾನುವಾರ (ಡಿ.7) ಇದೇ ಗ್ಯಾಂಗ್ನ ನೇತೃತ್ವದಲ್ಲಿ ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಇತರ ಇಬ್ಬರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜೈಲಿನಲ್ಲಿ ನಡೆಯುತ್ತಿದ್ದ ಗಾಂಜಾ ಮತ್ತು ಮಾದಕ ವಸ್ತುಗಳ ಸಾಗಾಟಕ್ಕೆ ಕಡಿವಾಣ ಹಾಕಿದ್ದೇ ಈ ಹಲ್ಲೆಗೆ ಕಾರಣವಾಗಿತ್ತು ಎನ್ನಲಾಗಿದೆ. ಜೈಲರ್ ಕಲ್ಲಪ್ಪ ಅವರ ಹೊಟ್ಟೆ ಮತ್ತು ಕೈಗೆ ಗಂಭೀರ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಬೆನ್ನಲ್ಲೇ, ಜೈಲಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದರೂ ಕೈದಿಗಳ ಅಟ್ಟಹಾಸ ಮಾತ್ರ ಕಡಿಮೆಯಾಗಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಗಿರೀಶ್ ನೇತೃತ್ವದ ಪೊಲೀಸ್ ತಂಡ ಜೈಲಿಗೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯಕ್ಕೆ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲವಾದರೂ, ಸತತವಾಗಿ ನಡೆಯುತ್ತಿರುವ ಈ ಘಟನೆಗಳು ಜೈಲು ಆಡಳಿತಕ್ಕೆ ತಲೆನೊವಾಗಿ ಪರಿಣಮಿಸಿದೆ. ಜೈಲಿನಲ್ಲಿ ಶಾಂತಿ ಕಾಪಾಡಲು ಮತ್ತು ಸಿಬ್ಬಂದಿ ರಕ್ಷಣೆಗಾಗಿ ಉನ್ನತ ಮಟ್ಟದ ಭದ್ರತಾ ಕ್ರಮಗಳು ಹಾಗೂ ಹೆಚ್ಚಿನ ಕಣ್ಗಾವಲು ಅಗತ್ಯವಿದೆ ಎಂದು ಸಾರ್ವಜನಿಕರು ಮತ್ತು ಅಧಿಕಾರಿಗಳು ಆಗ್ರಹಿಸಿದ್ದಾರೆ.
