ಬೆಂಗಳೂರು: ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಡಗರ ಮನೆಮಾಡಿದ್ದು, ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಂಭ್ರಮದ ಆಚರಣೆ ನಡೆಯುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣದ ಹೈಲೈಟ್ಸ್:
- ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರಿಂದ ಧ್ವಜಾರೋಹಣ.
- ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
- ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಂದ ಧ್ವಜಾರೋಹಣ ಹಾಗೂ ಪಥಸಂಚಲನ ವೀಕ್ಷಣೆ.
- ಬೆಳಗಾವಿ: ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ರಾಷ್ಟ್ರಧ್ವಜ ಹಾರಿಸಿದರು.
- ಧಾರವಾಡ: ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧ್ವಜಾರೋಹಣ ನೆರವೇರಿಸಿದರು.
- ರಾಮನಗರ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಧ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕಾರ.
- ಚಿಕ್ಕಮಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ರಾಷ್ಟ್ರಧ್ವಜಾರೋಹಣ ಮಾಡಿದರು.
- ಕೊಪ್ಪಳ: ಸಚಿವ ಶಿವರಾಜ ತಂಗಡಗಿ ಅವರಿಂದ ಧ್ವಜಾರೋಹಣ.
ಇದರೊಂದಿಗೆ ಗದಗದಲ್ಲಿ ಎಚ್. ಕೆ. ಪಾಟೀಲ್, ಉತ್ತರ ಕನ್ನಡದಲ್ಲಿ ಮಂಕಾಳ ವೈದ್ಯ, ಬಾಗಲಕೋಟೆಯಲ್ಲಿ ಆರ್. ಬಿ. ತಿಮ್ಮಾಪುರ, ಚಿತ್ರದುರ್ಗದಲ್ಲಿ ಡಿ.ಸುಧಾಕರ್, ಕೋಲಾರದಲ್ಲಿ ಬೈರತಿ ಸುರೇಶ್ ಹಾಗೂ ಚಾಮರಾಜನಗರದಲ್ಲಿ ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು.
ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ವೈಭವ
ಧ್ವಜಾರೋಹಣದ ನಂತರ ಪೊಲೀಸ್ ಪಡೆ, ಎನ್ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು.
