ಕಲಬುರಗಿ: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ನಾಡಹಬ್ಬದ ಉತ್ಸವದ ಮಧ್ಯೆಯೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಮೊಳಗಿದೆ. ಕರುನಾಡ ಹಬ್ಬದ ದಿನವೇ ಪ್ರತ್ಯೇಕ ರಾಜ್ಯದ ಆಗ್ರಹ ಮತ್ತೆ ಚರ್ಚೆಗೆ ಬಂದಿದೆ.
ಕಲಬುರಗಿಯ ಜಗತ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ವತಿಯಿಂದ ಧರಣಿ ಹಾಗೂ ಪ್ರತಿಭಟನೆ ನಡೆಯಿತು. ಪ್ರತ್ಯೇಕ ರಾಜ್ಯಕ್ಕಾಗಿ ಕಾರ್ಯಕರ್ತರು ಘೋಷಣೆ ಕೂಗಿದರು. ರಾಜ್ಯೋತ್ಸವದ ನಡುವೆಯೇ ಹೈಡ್ರಾಮಾ ನಡೆಸಿರುವ ಪ್ರತಿಭಟನಾಕಾರರು “ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಬೇಕು” ಎಂದು ಆಗ್ರಹಿಸಿದರು.
ಸಮಿತಿಯ ಮುಖಂಡರು ಕಲ್ಯಾಣ ಕರ್ನಾಟಕ ಭಾಗ ಸಮರ್ಪಕವಾಗಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತ್ಯೇಕ ರಾಜ್ಯ ನೀಡಿದಾಗ ಮಾತ್ರ ಈ ಪ್ರದೇಶದ ಜನರ ಜೀವನಮಟ್ಟ ಬದಲಾಗುತ್ತದೆ ಎಂದು ಘೋಷಣೆ ಕೂಗಿದ್ದು, ಪ್ರತಿಭಟನೆ ಹಿನ್ನಲೆ ಸ್ಥಳದಲ್ಲಿ ಪೊಲೀಸರು ಭದ್ರತೆ ಕಲ್ಪಿಸಿದ್ದರು.
