ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಚಾರ್ಮಾಡಿ ಘಾಟಿಯಲ್ಲಿ ಪ್ರಕೃತಿಯ ವಿಸ್ಮಯ ಅನಾವರಣಗೊಂಡಿದೆ. ಇಲ್ಲಿನ ವಾತಾವರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ನಡುವೆ ಹಸಿರು ರಾಶಿಯ ಮೇಲೆ ಆವರಿಸಿರುವ ದಟ್ಟ ಮಂಜು ರಮಣೀಯ ನೈಸರ್ಗಿಕ ಚಿತ್ತಾರವನ್ನು ಮೂಡಿಸಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಈ ಪ್ರಮುಖ ಘಾಟಿ ಪ್ರದೇಶದಲ್ಲಿ ಒಮ್ಮೆ ದಟ್ಟ ಮಂಜು ಕವಿದರೆ, ಮತ್ತೊಂದು ಕ್ಷಣದಲ್ಲೇ ಮಳೆರಾಯ ಅಬ್ಬರಿಸಲಾರಂಭಿಸುತ್ತಿದ್ದಾನೆ.
ಮಳೆಯ ನಡುವಿನ ಈ ಮಲೆಯಮಾರುತಗಳ ಮೋಡಿ ಒಂದೆಡೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ಸವಾಲಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಪ್ರವಾಸಿಗರನ್ನು ಮಾತ್ರ ಸಂಪೂರ್ಣವಾಗಿ ಮಂತ್ರಮುಗ್ಧರನ್ನಾಗಿಸಿದೆ. ದಟ್ಟ ಮಂಜಿನಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ವಾಹನ ಚಾಲಕರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.
ಆದರೆ, ಪ್ರಕೃತಿಯ ಈ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಮಾತ್ರ ಫುಲ್ ಖುಷಿಯಾಗಿದ್ದಾರೆ. ಮಂಜು ಮುಸುಕಿದ ವಾತಾವರಣದ ಸುಂದರ ಕ್ಷಣಗಳನ್ನು ಯುವಜನತೆ ಮತ್ತು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ.
