S Shorts

ರಕ್ಷಕನೇ ಭಕ್ಷಕ: ID ಕಾರ್ಡ್ ತೋರಿಸಿ ಕೇರಳ ಉದ್ಯಮಿಗಳಿಂದ 20 ಲಕ್ಷ ರೂ. ದರೋಡೆ ಮಾಡಿದ CID ಇನ್ಸ್‌ಪೆಕ್ಟರ್!

ರಕ್ಷಕನೇ ಭಕ್ಷಕ: ID ಕಾರ್ಡ್ ತೋರಿಸಿ ಕೇರಳ ಉದ್ಯಮಿಗಳಿಂದ 20 ಲಕ್ಷ ರೂ. ದರೋಡೆ ಮಾಡಿದ CID ಇನ್ಸ್‌ಪೆಕ್ಟರ್!
Author: Sagaradventure
Posted By: Sagaradventure
Updated: Jun 19, 2026 | 1:41 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಕ್ಷಕರೇ ಭಕ್ಷಕರಾಗಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಿಐಡಿ (CID) ವಿಭಾಗದ ಇನ್ಸ್‌ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ಉದ್ಯಮಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಪರಾರಿಯಾಗಿದ್ದಾರೆ.

ಪೊಲೀಸ್ ಐಡಿ ಕಾರ್ಡ್ ತೋರಿಸಿ ಬೆದರಿಕೆ

ಟ್ರೇಡಿಂಗ್ (ವ್ಯಾಪಾರ) ಉದ್ದೇಶಗಳಿಗಾಗಿ ಭಾರಿ ಮೊತ್ತದ ಹಣವನ್ನು ಹಿಡಿದುಕೊಂಡು ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಭರ್ಜರಿ ಪ್ಲಾನ್ ಮಾಡಿದ್ದರು. ಯೋಜನೆಯಂತೆ ಹೋಟೆಲ್ ಮುಂಭಾಗ ಅಧಿಕೃತ ಸಿಐಡಿ ಪೊಲೀಸ್ ಜೀಪ್ ನಿಲ್ಲಿಸಿ ಇನ್ಸ್‌ಪೆಕ್ಟರ್ ಒಳಗೇ ಕುಳಿತಿದ್ದರು. ಅವರ ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರೆಂದು ಇನ್ಸ್‌ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ (ID Card) ತೋರಿಸಿ, ‘ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ’ ಎಂದು ಉದ್ಯಮಿಗಳನ್ನು ತೀವ್ರವಾಗಿ ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂಪಾಯಿ ನಗದನ್ನು ಕಸಿದುಕೊಂಡು, ಹೊರಗೆ ನಿಂತಿದ್ದ ಪೊಲೀಸ್ ಜೀಪ್‌ನಲ್ಲೇ ಇಡೀ ಗ್ಯಾಂಗ್ ಪರಾರಿಯಾಗಿದೆ.

ಠಾಣೆಗೆ ದೂರು ನೀಡುತ್ತಿದ್ದಂತೆ ಖಾಕಿ ಅಧಿಕಾರಿ ಎಸ್ಕೇಪ್

ಆರಂಭದಲ್ಲಿ ಹೆದರಿದ್ದ ಕೇರಳದ ವ್ಯಕ್ತಿಗಳಿಗೆ ನಂತರದ ಬೆಳವಣಿಗೆಗಳಿಂದ ದರೋಡೆಯ ಬಗ್ಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಾಂಭೀರ್ಯತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್‌ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್‌ಪಿನ್ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರನನ್ನು ಬಂಧಿಸಿ, ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿದಂತೆ ಉಳಿದ ನಾಲ್ವರಿಗಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.