ಬೆಳಗಾವಿ : ನಾಯಕತ್ವ ಬದಲಾವಣೆ ಕುರಿತ ಆಂತರಿಕ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಬೆಳಗಾವಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಲಾಗಿದ್ದು, ಶಾಸಕರು ಮತ್ತು ಸಚಿವರಿಗೆ ಸಿಎಂ ಮತ್ತು ಡಿಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು, ಶಾಸಕರು ಹೇಳಿಕೆ ಕೊಟ್ಟು ಅನಗತ್ಯವಾಗಿ ಗೊಂದಲ ಸೃಷ್ಟಿಸದಂತೆ (Avoid Confusion) ಎಚ್ಚರಿಕೆ ನೀಡಿದ್ದು, ಅಧಿಕಾರ ಹಂಚಿಕೆಯ (Power Sharing) ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಆಪ್ತ ಬಣದ ಶಾಸಕರು, ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು (5 ವರ್ಷ ಸಿಎಂ) ಸಿಎಲ್ಪಿ ಸಭೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದರು. ಆದರೆ, ಈ ವಿಚಾರ ಸಭೆಯಲ್ಲಿ ಪ್ರಸ್ತಾಪವಾದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನಗಂಡ ಡಿ.ಕೆ.ಶಿ, ತಮ್ಮ ಆಪ್ತರಿಗೆ ಸಭೆಗೆ ಮೊದಲೇ ಪ್ರಸ್ತಾಪಿಸದಂತೆ ಸೂಚನೆ ನೀಡಿದರು. “ಎಲ್ಲಾ ಹತ್ತಿರಕ್ಕೆ ಬರ್ತಿದೆ, ಈ ಮಾತಾಡಿ ಗೊಂದಲ ಸೃಷ್ಟಿ ಮಾಡೋದು ಬೇಡ,” ಎಂಬ ಡಿಕೆಶಿ ಸೂಚನೆಯಿಂದ ಆಪ್ತ ಬಣದ ಶಾಸಕರು ಕೂಡ ಸೈಲೆಂಟ್ ಆದರು.
ಸಿಎಲ್ಪಿ ಸಭೆಯ ಪ್ರಮುಖಾಂಶಗಳು:
ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ. ಈ ಚರ್ಚೆಯಿಂದ ಬಿಜೆಪಿಗೆ (BJP) ಅನುಕೂಲವಾಗುತ್ತದೆ.
ಉಭಯ ಸದನಗಳಲ್ಲೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನ ಎತ್ತಿ ತೋರಿಸಬೇಕು. ಕೃಷಿ, ನೀರಾವರಿ ಹಾಗೂ ಉತ್ತರ ಕರ್ನಾಟಕದ ವಿಚಾರದಲ್ಲಿ ಕೇಂದ್ರದಿಂದ ಆಗಿರುವ ನಿರ್ಲಕ್ಷ್ಯವನ್ನು ಪ್ರಸ್ತಾಪಿಸಿ.
ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ಶಾಸಕರು ಅಪಸ್ವರ ಎತ್ತುವುದು ಬೇಡ, ಸರ್ಕಾರದ ಸಾಧನೆಯನ್ನು ಎತ್ತಿ ಹಿಡಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಹಾಗೂ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದರಿಂದ ಶಾಸಕರಿಗೆ ಹೆಚ್ಚು ಮಾತಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಸಿಎಂ ಮತ್ತು ಡಿಸಿಎಂ ಇಬ್ಬರ ಮಧ್ಯಪ್ರವೇಶದಿಂದ ಸಿಎಲ್ಪಿ ಸಭೆಯು ಅಧಿವೇಶನದ ಕಾರ್ಯತಂತ್ರಕ್ಕೆ ಸೀಮಿತವಾಯಿತು ಮತ್ತು ನಾಯಕತ್ವ ಬದಲಾವಣೆ ಕಿಚ್ಚಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ ಎಂದು ಹೇಳಬಹುದು.
