ಬೆಂಗಳೂರು: ಚುನಾವಣೆ ಮುಗಿದಿದ್ದರೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನಲ್ಲಿನ ಬೆಂಕಿ ಆರಿಲ್ಲ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಆರಂಭವಾದ ಅಸಮಾಧಾನ, ಈಗ ಸಚಿವ ಜಮೀರ್ ಅಹಮದ್ ಖಾನ್ ಅವರ ಸಚಿವ ಸ್ಥಾನಕ್ಕೇ ಕುತ್ತು ತರುವ ಹಂತಕ್ಕೆ ಬಂದು ತಲುಪಿದೆ.
ಮುಸ್ಲಿಂ ಸಮುದಾಯಕ್ಕೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದ ಮುಸ್ಲಿಂ ನಾಯಕರಲ್ಲೇ ಈಗ ಎರಡು ಬಣಗಳಾಗಿವೆ. ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು(Samarth Shamanur) ಪರವಾಗಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed) ಅವರು ಪ್ರಚಾರ ಮಾಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ MLC ಅಬ್ದುಲ್ ಜಬ್ಬಾರ್ ಕೂಡ ಪ್ರಚಾರದಿಂದ ದೂರ ಉಳಿದಿರುವುದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.
ಮುಸ್ಲಿಂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮತ್ತು ಅವರ ಮನವೊಲಿಸುವಲ್ಲಿ ಜಮೀರ್ ಅಹಮದ್ ವಿಫಲರಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಖುದ್ದಾಗಿ ಜಮೀರ್ ನಡೆ ಕುರಿತು ಹೈಕಮಾಂಡ್ಗೆ ವರದಿ ನೀಡಿದ್ದಾರೆ. ಪ್ರಚಾರ ಮಾಡದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒಂದು ಬಣ ಪಟ್ಟು ಹಿಡಿದಿದೆ.
ಮುಂದೇನು? ಜಮೀರ್ ಸೇಫ್ ಆಗ್ತಾರಾ?
ಹಿಂದೆ ಕೆ.ಎನ್. ರಾಜಣ್ಣ ಅವರ ವಿರುದ್ಧ ಕೇಳಿಬಂದಿದ್ದ ದೂರಿನಂತೆಯೇ ಈ ಪ್ರಕರಣವೂ ಸದ್ದು ಮಾಡುತ್ತಿದೆ. ಹೈಕಮಾಂಡ್ ಈ ದೂರನ್ನು ಗಂಭೀರವಾಗಿ ಪರಿಗಣಿಸಿದರೆ ಜಮೀರ್ಗೆ ಸಂಕಷ್ಟ ಎದುರಾಗಬಹುದು. ಅಥವಾ ತಮ್ಮ ಪ್ರಭಾವ ಬಳಸಿ ಜಮೀರ್ ಸೇಫ್ ಆಗ್ತಾರಾ ಎಂಬುದು ಕುತೂಹಲ ಮೂಡಿಸಿದೆ.
