S Shorts

Deadly Accident | ಮಂತ್ರಾಲಯದ ಬಳಿ ಭೀಕರ ಅಪಘಾತ: ಮೂರು ವರ್ಷದ ಮಗು ಸೇರಿ 8 ಮಂದಿ ದುರ್ಮರಣ

Deadly Accident | ಮಂತ್ರಾಲಯದ ಬಳಿ ಭೀಕರ ಅಪಘಾತ: ಮೂರು ವರ್ಷದ ಮಗು ಸೇರಿ 8 ಮಂದಿ ದುರ್ಮರಣ
Author: Meghana Gowda
Posted By: Meghana Gowda
Updated: Apr 16, 2026 | 10:01 AM

ಆಂಧ್ರಪ್ರದೇಶ: ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಭಕ್ತರ ಪಾಲಿಗೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಮೀಪವಿರುವ ಚಿಲಕನಡೋಣ ಬಳಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ವಿವರ:

ಹಾಸನ ಮತ್ತು ಚಿಕ್ಕಮಗಳೂರು ಮೂಲದ ಸುಮಾರು 18 ಜನರು ಬೊಲೆರೋ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದ್ದರು. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಕನಡೋಣ ಬಳಿ ಬರುತ್ತಿದ್ದಂತೆ, ಬೀದರ್‌ನಿಂದ ತುಮಕೂರಿನತ್ತ ಫ್ಲೈಯಾಶ್ (Flyash) ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಮತ್ತು ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡೂ ವಾಹನಗಳ ವೇಗ ಹೆಚ್ಚಾಗಿದ್ದರಿಂದ ಡಿಕ್ಕಿಯ ರಭಸಕ್ಕೆ ಬೊಲೆರೋ ವಾಹನ ಸಂಪೂರ್ಣ ಜಜ್ಜುಗುಜ್ಜಾಗಿದೆ.

ಈ ಭೀಕರ ದುರಂತದಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಕೇವಲ 3 ವರ್ಷದ ಪುಟ್ಟ ಮಗು ಹಾಗೂ  ಅಮೃತ, ತೇಜಸ್ವಿನಿ, ಧನ್ಯ, ದೀಪಿಕಾ, ದೀಕ್ಷಿತಾ, ಪ್ರತಾಪ್, ಕುಮಾರ್ ಮತ್ತು ಯಶೋದಮ್ಮ. ಸೇರಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಉಳಿದ 12 ಜನರನ್ನು ಕೂಡಲೇ ಕರ್ನೂಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಮಂತ್ರಾಲಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಚಾಲಕನ ನಿರ್ಲಕ್ಷ್ಯ ಅಥವಾ ಅತಿ ವೇಗ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿಯಿಡೀ ಪ್ರಯಾಣ ಮಾಡಿದ್ದ ಚಾಲಕನಿಗೆ ನಿದ್ರೆಯ ಮಂಪರು ಹತ್ತಿದ್ದೇ ಈ ದುರಂತಕ್ಕೆ ಕಾರಣವಾಯಿತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ರಾಯರ ಸನ್ನಿಧಿಗೆ ಕೆಲವೇ ಕಿಲೋಮೀಟರ್ ಇರುವಾಗ ಸಂಭವಿಸಿದ ಈ ಸಾವು ಭಕ್ತರ ಕುಟುಂಬಗಳಲ್ಲಿ ಮಡುಗಟ್ಟಿದ ಶೋಕ ತಂದಿದೆ.