ಉತ್ತರಕನ್ನಡ: ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಕಡಲತೀರದಲ್ಲಿ ಅಪರೂಪ ಎನ್ನುವಂತೆ ಡಾಲ್ಫಿನ್ ಮರಿಯೊಂದು ತೇಲಿಬಂದಿದ್ದು, ಸಮುದ್ರಕ್ಕೆ ವಾಪಸ್ಸಾಗಲಾಗದೇ ಪರದಾಡುತ್ತಿದ್ದ ಘಟನೆ ಶುಕ್ರವಾರ ನಡೆದಿದೆ.
ಗೋಕರ್ಣದ ಸೂರ್ಯ ರೆಸಾರ್ಟ್ ಸಮೀಪದ ಕಡಲತೀರಕ್ಕೆ ಸುಮಾರು ಐದಾರು ಅಡಿ ಉದ್ದದ ಡಾಲ್ಫಿನ್ ತೇಲಿಬಂದಿತ್ತು. ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನಲೆ ಡಾಲ್ಫಿನ್ ಮರಳಿ ಸಮುದ್ರಕ್ಕೆ ಹೋಗಲಾಗದೇ ಪರದಾಡುತ್ತಿದ್ದು, ತೀರಕ್ಕೆ ಸಮೀಪ ಬಂದಿದ್ದರಿಂದಾಗಿ ಉಸಿರಾಟಕ್ಕೂ ಕಷ್ಟಪಡುತ್ತಿತ್ತು.
ಈ ವೇಳೆ ಡಾಲ್ಫಿನ್ ಪರದಾಟ ಗಮನಿಸಿದ ರೆಸಾರ್ಟ್ ಮಾಲಕ ಯಶ್ವಂತ ಮಹಾಬಲೇಶ್ವರ ಗೌಡ ಮತ್ತು ಯುವಕ ಮಾದು ಗೌಡ ಅವರು ಡಾಲ್ಫಿನ್ನನ್ನು ಮರಳಿ ಸಮುದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಸಮುದ್ರದಲ್ಲಿ ಮೋಂಥಾ ಚಂಡಮಾರುತದ ಪರಿಣಾಮ ವೇಗವಾಗಿ ಗಾಳಿ ಬೀಸುತ್ತಿದ್ದು, ಅಲೆಗಳ ಅಬ್ಬರ ಸಹ ಹೆಚ್ಚಾಗಿದೆ. ಈ ಹಿನ್ನಲೆ ಡಾಲ್ಫಿನ್ ಅಲೆಗಳಿಗೆ ಸಿಲುಕಿ ತೀರಕ್ಕೆ ತೇಲಿ ಬಂದಿರಬಹುದೆಂದು ಅಂದಾಜಿಸಲಾಗಿದ್ದು, ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
