ಕೊಪ್ಪಳ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 26 ಗೋವುಗಳನ್ನು ಹಿಂದೂಪರ ಸಂಘಟನೆಗಳ ಯುವಕರು ತಡೆದು ರಕ್ಷಿಸಿರುವ ಘಟನೆ ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಬಳಿ ತಡರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಿಂದ ಕೇರಳದತ್ತ ಈ ಲಾರಿ ತೆರಳುತ್ತಿತ್ತು ಎನ್ನಲಾಗಿದೆ. ಲಾರಿಯಲ್ಲಿ 26 ಗೋವುಗಳನ್ನು ತುಂಬಿಸಿ, ಯಾರಿಗೂ ಅನುಮಾನ ಬಾರದಂತೆ ಮೇಲಿಂದ ತಾಡಪಾಲು ಹಾಕಿ ಮುಚ್ಚಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಿಜಾಪುರ ರಾಷ್ಟ್ರ ರಕ್ಷಣಾ ಪಡೆ ಹಾಗೂ ವಿಶ್ವ ಹಿಂದೂ ಪರಿಷತ್ (VHP) ಯುವಕರು ತಡರಾತ್ರಿ ಲಾರಿಯನ್ನು ಅಡ್ಡಗಟ್ಟಿ ತಡೆದಿದ್ದಾರೆ.
ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿ ಚಾಲಕ ಹಾಗೂ ಸಹಾಯಕನನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆಯಲಾದ ಎಲ್ಲಾ 26 ಗೋವುಗಳನ್ನು ಸುರಕ್ಷಿತವಾಗಿ ಕೊಪ್ಪಳದ ಜೈನ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.
ಈ ಅಕ್ರಮ ಗೋ ಸಾಗಾಟದ ವಿರುದ್ಧ ಬೆಂಗಳೂರು ಮೂಲದ ರಾಷ್ಟ್ರ ರಕ್ಷಣಾ ಪಡೆಯ ಸದಸ್ಯ ಪುನೀತ್ ಅವರು ದೂರು ನೀಡಿದ್ದು, ಈ ದೂರಿನ ಅನ್ವಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
