ಹಾರ್ದೋಯಿ: ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ವೇಗ ನೀಡುವ ಮಹತ್ವಾಕಾಂಕ್ಷೆಯ 594 ಕಿಲೋಮೀಟರ್ ಉದ್ದದ ‘ಗಂಗಾ ಎಕ್ಸ್ಪ್ರೆಸ್ವೇ’ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹಾರ್ದೋಯಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಉದ್ಘಾಟಿಸಿದರು. ಈ ಬೃಹತ್ ರಸ್ತೆ ಯೋಜನೆಯು ಮೀರತ್ ಮತ್ತು ಪ್ರಯಾಗ್ರಾಜ್ ನಗರಗಳನ್ನು ಸಂಪರ್ಕಿಸಲಿದ್ದು, ರಾಜ್ಯದ ಕೈಗಾರಿಕಾ ಮತ್ತು ಕೃಷಿ ವಲಯಕ್ಕೆ ಹೊಸ ಶಕ್ತಿ ತುಂಬಲಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಂಗಾ ನದಿಯು ಸಾವಿರಾರು ವರ್ಷಗಳಿಂದ ಉತ್ತರ ಪ್ರದೇಶದ ಜನರ ಜೀವನಕ್ಕೆ ಹೇಗೆ ಆಧಾರವಾಗಿದೆಯೋ, ಅದೇ ರೀತಿ ಈ ಎಕ್ಸ್ಪ್ರೆಸ್ವೇ ರಾಜ್ಯದ ಆರ್ಥಿಕ ಪ್ರಗತಿಯ ಹೊಸ ಜೀವನನಾಡಿಯಾಗಲಿದೆ ಎಂದು ಮೋದಿ ಬಣ್ಣಿಸಿದರು. ಈ ಯೋಜನೆಯಿಂದಾಗಿ ಮೀರತ್ನಿಂದ ಪ್ರಯಾಗ್ರಾಜ್ವರೆಗಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಜನರ ಸಂಚಾರ ಸುರಕ್ಷಿತ ಮತ್ತು ವೇಗವಾಗಲಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ಪ್ರಧಾನಿಯವರು ಯುಪಿಐಡಿಎ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ವೀಕ್ಷಿಸಿ, ಸಸಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದು, 6 ಪಥಗಳ ಈ ರಸ್ತೆಯು ಹಳ್ಳಿಗಳು, ರೈತರು ಮತ್ತು ಯುವಕರನ್ನು ಮಾರುಕಟ್ಟೆ ಹಾಗೂ ಉದ್ಯೋಗದೊಂದಿಗೆ ಬೆಸೆಯುವ ಪ್ರಮುಖ ಕೊಂಡಿಯಾಗಲಿದೆ ಎಂದಿದ್ದಾರೆ. ಈ ರಸ್ತೆಯನ್ನು ಮುಂದೆ 8 ಪಥಗಳವರೆಗೆ ವಿಸ್ತರಿಸುವ ಅವಕಾಶವಿದ್ದು, ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸುವಂತೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ವಿಶೇಷವೆಂದರೆ, ತುರ್ತು ಸಂದರ್ಭದಲ್ಲಿ ವಾಯುಪಡೆಯ ಯುದ್ಧ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ಶಹಜಹಾನ್ಪುರ ಬಳಿ 3.2 ಕಿ.ಮೀ ಉದ್ದದ ವೈಮಾನಿಕ ಪಟ್ಟಿಯನ್ನು ನಿರ್ಮಿಸಲಾಗಿದೆ.
ಈ ಎಕ್ಸ್ಪ್ರೆಸ್ವೇ ಮೀರತ್, ಹಾಪುರ್, ಬುಲಂದ್ಶಹರ್ ಸೇರಿದಂತೆ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ರಸ್ತೆಯುದ್ದಕ್ಕೂ ಬೃಹತ್ ಕೈಗಾರಿಕಾ ಕಾರಿಡಾರ್ಗಳು, ಕೋಲ್ಡ್ ಸ್ಟೋರೇಜ್ ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸವಾರರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ಕರೆ ಪೆಟ್ಟಿಗೆಗಳು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇದು ಭಾರತದ ಅತಿ ಉದ್ದದ ಮತ್ತು ಅತ್ಯಾಧುನಿಕ ರಸ್ತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಯೋಜನೆಯು ಉತ್ತರ ಪ್ರದೇಶವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
