ಕೇಂದ್ರ ಸರ್ಕಾರದ 81,000 ಕೋಟಿ ರೂಪಾಯಿಗಳ ಅತ್ಯಂತ ಮಹತ್ವಾಕಾಂಕ್ಷೆಯ ಗ್ರೇಟ್ ನಿಕೋಬಾರ್ ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಯ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ನಮ್ಮ ಜೀವಿತಾವಧಿಯಲ್ಲಿ ಈ ದೇಶದ ನೈಸರ್ಗಿಕ ಮತ್ತು ಬುಡಕಟ್ಟು ಪರಂಪರೆಯ ವಿರುದ್ಧ ನಡೆದ ಅತ್ಯಂತ ದೊಡ್ಡ ಹಗರಣ ಹಾಗೂ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ದ್ವೀಪಕ್ಕೆ ಖುದ್ದಾಗಿ ಭೇಟಿ ನೀಡಿರುವ ಅವರು, ಕೇಂದ್ರದ ಈ ಯೋಜನೆಯು ಅಭಿವೃದ್ಧಿಯ ಮುಖವಾಡ ತೊಟ್ಟ ವಿನಾಶವಲ್ಲದೆ ಬೇರೇನೂ ಅಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ನಿಕೋಬಾರ್ ಜಿಲ್ಲೆಯ ಕ್ಯಾಂಪ್ಬೆಲ್ ಬೇನಲ್ಲಿನ ಸ್ಥಳೀಯ ಬುಡಕಟ್ಟು ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಬೃಹತ್ ಯೋಜನೆಯಲ್ಲಿ ಪಾರದರ್ಶಕತೆಯ ತೀವ್ರ ಕೊರತೆಯಿದೆ ಎಂದು ಆರೋಪಿಸಿರುವ ಸ್ಥಳೀಯ ನಾಯಕರು, ಇದರಿಂದ ಪರಿಸರಕ್ಕೆ ಆಗುವ ಅಪಾರ ಹಾನಿ ಹಾಗೂ ಬುಡಕಟ್ಟು ಜನರ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರವು ಇಲ್ಲಿ ಮಾಡುತ್ತಿರುವುದನ್ನು ‘ಯೋಜನೆ’ ಎಂದು ಕರೆಯುತ್ತಿದೆ, ಆದರೆ ನಾನು ಕಣ್ಣಾರೆ ನೋಡಿರುವುದು ಯೋಜನೆಯಲ್ಲ ಎಂದಿದ್ದಾರೆ. ಕೊಡಲಿ ಏಟಿಗೆ ಬಲಿಯಾಗಲು ಗುರುತಿಸಲಾಗಿರುವ ಲಕ್ಷಾಂತರ ಮರಗಳು, ಸಾಯುವ ಶಿಕ್ಷೆಗೆ ಗುರಿಯಾಗಿರುವ 160 ಚದರ ಕಿಲೋಮೀಟರ್ ವಿಸ್ತೀರ್ಣದ ದಟ್ಟ ಮಳೆಕಾಡು ಹಾಗೂ ವಸತಿ ಕಳೆದುಕೊಂಡು ನಿರ್ಲಕ್ಷ್ಯಕ್ಕೊಳಗಾದ ಅಮಾಯಕ ಸಮುದಾಯಗಳನ್ನು ನಾನು ನೋಡಿದ್ದೇನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮರಗಳು ನಮ್ಮ ನೆನಪಿಗಿಂತಲೂ ಹಳೆಯವು, ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಕಾಡುಗಳು ಮತ್ತು ದ್ವೀಪದಲ್ಲಿ ವಾಸಿಸುವ ಸುಂದರ ಜನರಿಂದ ಅವರ ಹಕ್ಕುಗಳನ್ನು ಅನ್ಯಾಯವಾಗಿ ದೋಚಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಪ್ರಮುಖ ಮೂಲವೆಂದರೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಈ ಬೃಹತ್ ಮೂಲಸೌಕರ್ಯ ಯೋಜನೆಗೆ ನೀಡಿರುವ ಅನುಮತಿಯಾಗಿದೆ. ಇದನ್ನು ಕಾಂಗ್ರೆಸ್ ಪಕ್ಷವು ಈ ಹಿಂದೆಯೇ ಅರ್ಧಬೆಂದ ಮತ್ತು ದುರುದ್ದೇಶಪೂರಿತ ನಿರ್ಧಾರ ಎಂದು ಟೀಕಿಸಿತ್ತು. ಗ್ರೇಟ್ ನಿಕೋಬಾರ್ ದ್ವೀಪಕ್ಕಾಗಿ ಪ್ರಸ್ತಾಪಿಸಲಾಗಿರುವ ಈ ಯೋಜನೆಯು, ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ದ್ವಿ-ಬಳಕೆಯ ನಾಗರಿಕ ಮತ್ತು ಮಿಲಿಟರಿ ವಿಮಾನ ನಿಲ್ದಾಣ, ಬೃಹತ್ ವಿದ್ಯುತ್ ಸ್ಥಾವರ ಹಾಗೂ ಹೊಸ ಪಟ್ಟಣವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
