ಕಾರವಾರ(ಉತ್ತರಕನ್ನಡ): ಸಿದ್ದಾಪುರ ತಾಲೂಕಿನ ವಸಂತ್ ನಾಯ್ಕ್ ಕೊ*ಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ಕಾರವಾರದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜ್ಯೋತಿಷಿ ಕಮಲಾಕರ್ ಭಟ್ನನ್ನು, ಇದೀಗ ಪೋಕ್ಸೋ (POCSO) ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಶಿವಮೊಗ್ಗ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು, ಘಟನಾ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಆರೋಪಿಯ ವಿಚಾರಣೆ ಅತ್ಯಗತ್ಯವಾಗಿದ್ದರಿಂದ, ತುಂಗಾನಗರ ಪೊಲೀಸರು ಕಾರವಾರ ಜೈಲಿನಲ್ಲಿದ್ದ ಕಮಲಾಕರ್ ಭಟ್ನನ್ನು ವಶಕ್ಕೆ ಪಡೆದು ಶಿವಮೊಗ್ಗಕ್ಕೆ ಕರೆತಂದಿದ್ದರು. ಬಳಿಕ ಆತನನ್ನು ಶಿವಮೊಗ್ಗದ ಪೋಕ್ಸೋ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಪ್ರಕರಣದ ತನಿಖೆಯ ಅಗತ್ಯತೆಯನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಸಿದ್ದಾಪುರದ ಅವರಗುಪ್ಪ ಗ್ರಾಮದ ವಸಂತ್ ನಾಯ್ಕ್ ಹ*ತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕಮಲಾಕರ್ ಭಟ್ ಇದೀಗ ಪೋಕ್ಸೋ ಪ್ರಕರಣದಲ್ಲೂ ಸಿಲುಕಿದ್ದು, ತುಂಗಾನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
