ಮುಂಬೈನ ಚರ್ಚ್ಗೇಟ್-ನಲ್ಲಸೋಪಾರಾ ಫಾಸ್ಟ್ ಲೋಕಲ್ ಟ್ರೈನ್ನಲ್ಲಿ (ರೈಲು ಸಂಖ್ಯೆ 90663) ನಡೆದ ಭೀಕರ ಘಟನೆಯೊಂದರಲ್ಲಿ 22 ವರ್ಷದ ಮಯಾಂಕ್ ಲೋಹರ್ ಎಂಬ ಯುವಕನನ್ನು ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ. ಅಂಧೇರಿ ಮತ್ತು ಬೊರಿವಲಿ ನಿಲ್ದಾಣಗಳ ನಡುವೆ ಚಲಿಸುತ್ತಿದ್ದ ರೈಲಿನ ಪ್ರಥಮ ದರ್ಜೆ (First-class) ಬೋಗಿಯಲ್ಲಿ ಸಹಪ್ರಯಾಣಿಕನೊಬ್ಬ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದ ಕಾರಣ ರೈಲಿನ ಬೋಗಿಯ ಬಾಗಿಲನ್ನು ಮುಚ್ಚುವ ವಿಚಾರವಾಗಿ ಮಯಾಂಕ್ ಮತ್ತು ಆರೋಪಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ, ಕೋಪಗೊಂಡ ಆರೋಪಿಯು ಏಕಾಏಕಿ ಮಯಾಂಕ್ ಹೊಟ್ಟೆಗೆ ಮಾರಕಾಸ್ತ್ರದಿಂದ ಇರಿದಿದ್ದಾನೆ. ರೈಲು ಬೊರಿವಲಿ ನಿಲ್ದಾಣವನ್ನು ತಲುಪಿ ನಿಲ್ಲುವ ಮುನ್ನವೇ ಆರೋಪಿಯು ಬೋಗಿಯಿಂದ ಜಿಗಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಯುವಕ ಸಾ*ವು
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಪಶ್ಚಿಮ ರೈಲ್ವೆ ಸಿಬ್ಬಂದಿ, ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ವೈದ್ಯಕೀಯ ತಂಡಗಳು ಬೊರಿವಲಿ ನಿಲ್ದಾಣಕ್ಕೆ ದೌಡಾಯಿಸಿವೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಯಾಂಕ್ ಲೋಹರ್ನನ್ನು ಕೂಡಲೇ ಕಾಂದಿವಲಿಯಲ್ಲಿರುವ ಶತಾಬ್ದಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಆತ ಮೃ*ತಪಟ್ಟಿದ್ದಾನೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.
ಪ್ರಸ್ತುತ ರೈಲ್ವೆ ಪೊಲೀಸರು (GRP) ಈ ಭೀಕರ ಹ*ತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ರೈಲ್ವೆ ನಿಲ್ದಾಣ, ಪ್ಲಾಟ್ಫಾರ್ಮ್ ಹಾಗೂ ಬೋಗಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದ್ದು, ಪರಾರಿಯಾಗಿರುವ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಸಹಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
