ಬೆಂಗಳೂರು: ನವೆಂಬರ್ನಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪದಗ್ರಹಣ ಮಾಡಲಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗರಂ ಆದರು.
ಮಾಧ್ಯಮ ಪ್ರತಿನಿಧಿಗಳು ಈ ವಿಚಾರವನ್ನು ಪ್ರಶ್ನಿಸಿದಾಗ ಸಿಟ್ಟಾದ ಸಿಎಂ ಪ್ರತಿಕ್ರಿಯಿಸುತ್ತಾ, “ನಿನಗೆ ಅವರು ಹೇಳಿದ್ರಾ? ನಿಮಗೆ ಅವರು ಹೇಳಿದ್ರಾ? ನನಗೆ ಗೊತ್ತಿಲ್ಲ,” ಎಂದು ಮರುಪ್ರಶ್ನೆ ಹಾಕುವ ಮೂಲಕ ಆಕ್ರೋಶಗೊಂಡರು.
ಅವರು ಮುಂದುವರಿದು, “ನಿಮಗೆ ಯಾರು ಹೇಳಿದ್ರು? ಎಲ್ಲಿ ಹೇಳಿದ್ದಾರೆ? ನಿನಗೆ ಹೇಗೆ ಗೊತ್ತಾಯ್ತು? ಎಲ್ಲಿ ಬಂದಿದೆ?” ಎಂದು ಮಾದ್ಯಮದವರನ್ನೇ ಪ್ರಶ್ನಿಸಿ ಗರಂ ಆದರು.
“ಡಿ.ಕೆ.ಶಿವಕುಮಾರ ಸಿಎಂ ಆಗುವ ಕುರಿತು ಯಾವ ಪತ್ರಿಕೆಯಲ್ಲಿ ಬಂದಿದೆ?, ನಾನೂ ಪ್ರತಿದಿನ ಪತ್ರಿಕೆ ಓದುತ್ತೇನೆ, ಎಲ್ಲ ಪತ್ರಿಕೆಗಳನ್ನೂ ಓದುತ್ತೇನೆ. ಆದರೆ ಯಾವುದರಲ್ಲೂ ಇಂಥ ಸುದ್ದಿ ಬಂದಿಲ್ಲ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಿಎಂ ಅವರ ಈ ಹೇಳಿಕೆ ಮೂಲಕ ನವೆಂಬರ್ನಲ್ಲಿ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಿದ್ಧರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
