ಬಳ್ಳಾರಿ: ಸಂಡೂರಿನ ತೋರಗಲ್ಲು–ಬನ್ನಿಹಟ್ಟಿ ರೈಲ್ವೆ ಕ್ರಾಸಿಂಗ್ ಬಳಿ ಅನುಮಾನಾಸ್ಪದವಾಗಿ ಸಾವಿರಾರು ಟನ್ ಅದಿರನ್ನು ಡಂಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬನ್ನಿಹಟ್ಟಿಯಿಂದ ಲಿಂಗದಹಳ್ಳಿಗೆ ಹೋಗುವ ದಾರಿ ಪಕ್ಕದಲ್ಲೇ ಸುಮಾರು 4 ಸಾವಿರ ಟನ್ ನಷ್ಟು ಅದಿರನ್ನು ಹಾಕಿ ಹೋಗಿರುವುದು ಪತ್ತೆಯಾಗಿದೆ.
ಈ ಅದಿರು ಸುಹಾನ್ ಕಂಪೆನಿಗೆ ಸೇರಿದ್ದು ಎನ್ನಲಾಗಿದ್ದು, ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಡಂಪ್ ಮಾಡಲಾಗಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ಖನಿಜ ಮತ್ತು ಭೂ ವಿಜ್ಞಾನ ಇಲಾಖೆ(DMG) ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಒಟ್ಟು 205 ಲಾರಿಗಳ ಪರ್ಮಿಟ್ನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಏಕಾಏಕಿ ಡಂಪಿಂಗ್ ಆಗಿರುವುದರಿಂದ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಅನುಮಾನಾಸ್ಪದ ಡಂಪಿಂಗ್ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
