S Shorts

Transport Employees VS Government | ‘ನಾ ಕೊಡೆ.. ನೀ ಬಿಡೆ’ ಜಿದ್ದಾಜಿದ್ದಿ: ಶೇ. 7ರಷ್ಟು ವೇತನ ಏರಿಕೆ ಆಫರ್ ತಿರಸ್ಕರಿಸಿದ ನೌಕರರು

Transport Employees VS Government |  ‘ನಾ ಕೊಡೆ.. ನೀ ಬಿಡೆ’ ಜಿದ್ದಾಜಿದ್ದಿ: ಶೇ. 7ರಷ್ಟು ವೇತನ ಏರಿಕೆ ಆಫರ್ ತಿರಸ್ಕರಿಸಿದ ನೌಕರರು
Author: Meghana Gowda
Posted By: Meghana Gowda
Updated: Apr 18, 2026 | 12:47 PM

ಬೆಂಗಳೂರು: ರಾಜ್ಯದ ಸಾರಿಗೆ ನೌಕರರ ವೇತನ ಪರಿಷ್ಕರಣೆಯ ವಿಚಾರದಲ್ಲಿ ಸರ್ಕಾರ ಮತ್ತು ನೌಕರರ ಒಕ್ಕೂಟದ ನಡುವಿನ ಸಂಧಾನ ಸಭೆಗಳು ಮತ್ತೆ ವಿಫಲವಾಗಿವೆ. ಸರ್ಕಾರದ ಪರವಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (MD) ಅಕ್ರಂ ಪಾಷ ಅವರು ನೀಡಿದ ‘ಶೇ. 7ರಷ್ಟು ವೇತನ ಏರಿಕೆ’ಯ ಆಫರ್ ಅನ್ನು ನೌಕರರ ಸಂಘಟನೆಗಳು ಸಾರಾಸಗಟಾಗಿ ತಿರಸ್ಕರಿಸಿದ್ದು, ಹೋರಾಟದ ಹಾದಿ ಹಿಡಿದಿವೆ.

ಸಂಧಾನ ಸಭೆಯಲ್ಲಿ ಏನಾಯ್ತು?

ಇತ್ತೀಚೆಗೆ ನಡೆದ ಸಭೆಯಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಮುಂದಿಟ್ಟ ಎಂಡಿ ಅಕ್ರಂ ಪಾಷ ಅವರು ಈ ಕೆಳಗಿನ ಪ್ರಸ್ತಾಪಗಳನ್ನು ಮಂಡಿಸಿದ್ದರು. ಈ ಹಿಂದೆ ಶೇ. 5ರಷ್ಟು ಏರಿಕೆಯ ಭರವಸೆ ನೀಡಿದ್ದ ಸರ್ಕಾರ, ಈಗ ಅದನ್ನು ಶೇ. 7ಕ್ಕೆ ಹೆಚ್ಚಿಸಲು ಒಪ್ಪಿದೆ. ಒಂದು ವೇಳೆ ನೌಕರರು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರೆ, ಜೂನ್ ತಿಂಗಳಿನಿಂದಲೇ ಪರಿಷ್ಕೃತ ವೇತನ ನೀಡುವುದಾಗಿ ಭರವಸೆ ನೀಡಲಾಗಿದೆ.

ನೌಕರರ ಪಟ್ಟು ಮತ್ತು ಬೇಡಿಕೆಗಳೇನು?

ಸರ್ಕಾರದ ಈ ಅಲ್ಪ ಪ್ರಮಾಣದ ಏರಿಕೆಗೆ ಒಪ್ಪದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ತನ್ನ ಹಳೆಯ ಬೇಡಿಕೆಗಳಿಗೆ ಅಂಟಿಕೊಂಡಿದೆ. ನೌಕರರು ಕನಿಷ್ಠ ಶೇ. 25ರಷ್ಟು ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದಾರೆ. 2024ರ ಜನವರಿಯಿಂದಲೇ ವೇತನ ಪರಿಷ್ಕರಣೆ ಅನ್ವಯವಾಗಬೇಕು ಹಾಗೂ ಕಳೆದ 38 ತಿಂಗಳ ಬಾಕಿ ಉಳಿದಿರುವ ಹಿಂಬಾಕಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದು ನೌಕರರ ಮುಖ್ಯ ಬೇಡಿಕೆ.

ಏಪ್ರಿಲ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರ?

ಸರ್ಕಾರದ ಧೋರಣೆಯಿಂದ ಅಸಮಾಧಾನಗೊಂಡಿರುವ ಸಾರಿಗೆ ನೌಕರರ ಸಂಘಟನೆಗಳು ಈಗಾಗಲೇ ಏಪ್ರಿಲ್ 21 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕರೆ ನೀಡಿವೆ. ಈ ಮುಷ್ಕರ ನಡೆದರೆ ರಾಜ್ಯದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಜನಸಾಮಾನ್ಯರ ಸಂಚಾರಕ್ಕೆ ದೊಡ್ಡ ಹೊಡೆತ ಬೀಳಲಿದೆ.