ಮಂಡ್ಯ : ಅನಾರೋಗ್ಯದಿಂದ ಸಾವನ್ನಪ್ಪಿದ್ದ ಗಂಡನ ಅಂತ್ಯಸಂಸ್ಕಾರ ಮುಗಿಸಿ ಪತ್ನಿ ಆತ್ಮಹತ್ಯೆ ಶರಣಾಗಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅತ್ತಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಗೀತಾ ಅವರ ಪತಿ ರಾಜು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸಂಜೆ ಸಾವನ್ನಪ್ಪಿದ್ದರು. ಪತಿಯ ಸಾವಿನಿಂದ ಗೀತಾ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಗಂಡನಿಲ್ಲದೆ ಜೀವನ ಮಾಡೋಕೆ ಸಾಧ್ಯವಿಲ್ಲ ಅಂತಾ ನಿರ್ಧರಿಸಿದ್ದರೆನೋ, ಪತಿಯ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದು ಗೀತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಆರು ತಿಂಗಳ ಹಿಂದಷ್ಟೇ ಮೃತ ದಂಪತಿಯ ಕಿರಿಯ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ ಅನಾರೋಗ್ಯದಿಂದ ಮನೆಯ ಯಜಮಾನ ರಾಜು ಸಾವನ್ನಪ್ಪಿದ್ದಾರೆ. ಅವರ ಬೆನ್ನಲ್ಲೇ ಹೆಂಡತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ, ತಾಯಿ, ಸಹೋದರನ ಸಾವಿನಿಂದ ಹಿರಿಯ ಮಗ ಅನಾಥರಾಗಿದ್ದಾರೆ.
