ನವದೆಹಲಿ: ದೆಹಲಿಯ ವಾಯುಮಾಲಿನ್ಯದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಆದರೆ ಈಗ ದೆಹಲಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್ನಲ್ಲಿ (CP) ಬಾಲಕನೊಬ್ಬ ಬಾಟಲಿಗಳಲ್ಲಿ ತುಂಬಿದ ‘ಹಿಮಾಚಲ ಪ್ರದೇಶದ ಶುದ್ಧ ಗಾಳಿ’ಯನ್ನು ಮಾರಾಟ ಮಾಡುತ್ತಿದ್ದಾನೆ.
ವಾಯುಮಾಲಿನ್ಯದ ನಡುವೆ ಹೊಸ ಬಿಸಿನೆಸ್!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಬಾಲಕನೊಬ್ಬ ಕೆಲವು ಖಾಲಿ ನೀರಿನ ಬಾಟಲಿಗಳನ್ನು ಹಿಡಿದು ನಿಂತಿರುವುದು ಕಂಡುಬರುತ್ತದೆ. ದಾರಿಯಲ್ಲಿ ಹೋಗುವವರನ್ನು ನಿಲ್ಲಿಸಿ, “ಸರ್, ಇದು ಹಿಮಾಚಲದ ಪರ್ವತಗಳ ತಾಜಾ ಗಾಳಿ, ದೆಹಲಿಯ ಮಾಲಿನ್ಯದಿಂದ ಮುಕ್ತಿ ಪಡೆಯಲು ಇದನ್ನು ಕೊಳ್ಳಿ” ಎಂದು ಹೇಳುತ್ತಿದ್ದಾನೆ.
ದೆಹಲಿಯ ಕಲುಷಿತ ಗಾಳಿಯಿಂದ ಬೇಸತ್ತ ಜನರಿಗೆ ‘ಪರ್ವತದ ಗಾಳಿ’ ನೀಡುವ ಈತನ ವಿಶಿಷ್ಟ ಐಡಿಯಾ ಈಗ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
View this post on Instagram
ಒಂದು ಬಾಟಲಿ ಗಾಳಿಗೆ ಆತ 20 ರಿಂದ 50 ರೂಪಾಯಿ ಕೇಳುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನು ನೋಡಿದ ಕೆಲವರು “ಇದು ಸ್ಮಾರ್ಟ್ ಬಿಸಿನೆಸ್” ಎಂದರೆ, ಇನ್ನು ಕೆಲವರು “ಭವಿಷ್ಯದಲ್ಲಿ ನಾವು ನಿಜವಾಗಿಯೂ ಗಾಳಿಯನ್ನು ಹೀಗೆ ಕೊಳ್ಳಬೇಕಾದ ಪರಿಸ್ಥಿತಿ ಬರಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅನೇಕರ ಪ್ರಕಾರ, ಇದು ಕೇವಲ ಸೋಷಿಯಲ್ ಮೀಡಿಯಾ ಕಂಟೆಂಟ್ಗಾಗಿ ಮಾಡಿದ ‘ಪ್ರಾಂಕ್’ ಅಥವಾ ದೆಹಲಿಯ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಮಾಡಿದ ವಿಡಿಯೋ ಎನ್ನಲಾಗುತ್ತಿದೆ. ಆದರೂ, ಆ ಬಾಲಕನ ಮಾತುಗಾರಿಕೆ ಮತ್ತು ವಿಶ್ವಾಸಕ್ಕೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
