ಜಾರಿ ನಿರ್ದೇಶನಾಲಯ (ED) ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಲೋಕೋಪಯೋಗಿ (PWD) ಇಲಾಖೆಯಲ್ಲಿ ನಡೆದಿರುವ ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ಟೆಂಡರ್ ಹಗರಣ ಬಯಲಾಗಿದೆ.
ಪಶ್ಚಿಮ ಬಂಗಾಳ ಮೂಲದ ‘ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್’ (BVEPL) ಎಂಬ ಕಂಪನಿಗೆ ಟೆಂಡರ್ ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಗುತ್ತಿಗೆ ಪಡೆಯಲು ಈ ಕಂಪನಿಯು ಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂದು ಇ.ಡಿ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಬಂಗಾಳದ ಈ ಕಂಪನಿ ನೀಡಿದ ಲಂಚದ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆಘಾತಕಾರಿ ಅಂಶವೂ ಇ.ಡಿ ತನಿಖೆ ವೇಳೆ ಬಹಿರಂಗವಾಗಿದೆ.
ಇ.ಡಿ ದಾಳಿಯ ಬೆನ್ನಲ್ಲೇ ಮಾದ್ಯಮಗಳಿಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ (KRDCL) BVEPL ಕಂಪನಿಯು ಒಟ್ಟು ಮೂರು ಬೃಹತ್ ರಸ್ತೆ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದೆ. ಇದರಲ್ಲಿ ಮೊದಲನೆಯದಾಗಿ, ದೇವನಹಳ್ಳಿಯಿಂದ ವೇಮಗಲ್ ಮುಖಾಂತರ ಕೋಲಾರದವರೆಗೆ ಸಾಗುವ 48 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಗಾಗಿ 2026 ರ ಮಾರ್ಚ್ ತಿಂಗಳಿನಲ್ಲಿ 1,178 ಕೋಟಿ ರೂಪಾಯಿ ಮೊತ್ತದ ಟೆಂಡರ್ ಅನ್ನು ಈ ಕಂಪನಿಗೆ ಹಂಚಿಕೆ ಮಾಡಲಾಗಿದೆ.
ಎರಡನೇ ಯೋಜನೆಯಾಗಿ, ಹೊಸಕೋಟೆಯಿಂದ ಮಾಲೂರು ವರೆಗಿನ 25 ಕಿಲೋಮೀಟರ್ ರಸ್ತೆ ಹಾಗೂ ಫ್ಲೈಓವರ್ ನಿರ್ಮಾಣ ಕಾಮಗಾರಿಗಾಗಿ 1,054 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಇದೇ ಕಂಪನಿಗೆ ನೀಡಲಾಗಿದೆ. ಇನ್ನು ಮೂರನೇ ಅತಿ ದೊಡ್ಡ ಕಾಮಗಾರಿಯಾಗಿ, ರಾಯಚೂರಿನಿಂದ ಲಿಂಗಸೂಗೂರು ವರೆಗಿನ 77 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಗಾಗಿ PWD ಇಲಾಖೆಯಡಿಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಬರೋಬ್ಬರಿ 1,696 ಕೋಟಿ ರೂಪಾಯಿಗಳ ಟೆಂಡರ್ ಅನ್ನು BVEPL ಕಂಪನಿಯ ಪಾಲು ಮಾಡಲಾಗಿದೆ.
ಒಟ್ಟಾರೆಯಾಗಿ ರಾಜ್ಯದ ಈ ಮೂರು ಪ್ರಮುಖ ರಸ್ತೆ ಕಾಮಗಾರಿಗಳ ಹಂಚಿಕೆ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಮೊತ್ತದ ಲಂಚದ ಆಸೆಗೆ ಮಣೆಹಾಕಲಾಗಿದೆ ಎಂಬುದು ಇ.ಡಿ ತನಿಖೆಯಿಂದ ಸ್ಪಷ್ಟವಾಗಿದೆ.
