ಸಿಲ್ವಾಸಾ (ದಾದರ್): ರಾಜಕೀಯ ಪ್ರಚಾರದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ, ಕಾಂಗ್ರೆಸ್ ನಾಯಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ದಾದರ್ನ ಸಿಲ್ವಾಸಾದಲ್ಲಿ ಅಭ್ಯರ್ಥಿಯ ಮನೆಯಲ್ಲಿ ಸಾಂಪ್ರದಾಯಿಕ ‘ನಾಟಿ’ ಊಟವನ್ನು ಸವಿದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಈ ವಿಶೇಷ ಊಟವು ಅವರಿಗೆ ತಮ್ಮ ಅಜ್ಜಿಯ ಪಾಠಗಳನ್ನು ಮತ್ತು ಕೃಷಿಯ ಮೌಲ್ಯವನ್ನು ನೆನಪಿಸಿದೆ.

ಮರೆತುಹೋದ ಸೊಗಡು ಮರುಕಳಿಸಿತು: ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯಕರ ಮತ್ತು ರುಚಿಕರ ಊಟ ಎಂದು ಬಣ್ಣಿಸಿರುವ ಡಾ.ಅಂಜಲಿ ಅವರು, ಊಟದ ಸಿದ್ಧತೆ ಮತ್ತು ಪರಿಸರವನ್ನು ವಿವರಿಸಿದ್ದಾರೆ:
ʼಸಗಣಿ ಸಾರಿಸಿದ ನೆಲದ ಮೇಲೆ ಕುಳಿತು, ಹಳ್ಳಿಯ ವಾತಾವರಣದಲ್ಲಿ ಊಟ ಮಾಡಿದ್ದು ಬಾಲ್ಯದ ದಿನಗಳನ್ನು ನೆನಪಿಸಿದೆ. ಕಾಡಿನಲ್ಲಿ ಬೆಳೆದ ರಾಗಿ (ಅಥವಾ ನಾಂಗಲಿ) ರೊಟ್ಟಿ ಮತ್ತು ಉಪ್ಪು, ಮೆಣಸಿನಕಾಯಿಯೊಂದಿಗೆ ಸರಳವಾಗಿ ಬೇಯಿಸಿದ ಉದ್ದಿನಬೇಳೆ ಸಾಂಬಾರ್ (Urad Dal) ಅನ್ನು ಪತ್ರಾವಳಿ ಎಲೆಯ ಮೇಲೆ ಬಡಿಸಲಾಗಿತ್ತು. ವಿಶೇಷವಾಗಿ ಬಿಸಿಬಿಸಿ ಖಾರವಾದ ಮಿರ್ಚಿ ಥೇಚಾ ಊಟದ ರುಚಿಯನ್ನು ಹೆಚ್ಚಿಸಿತ್ತುʼ ಎಂದಿದ್ದಾರೆ.
ಅಜ್ಜಿಯ ಪಾಠದ ನೆನಪು: ಸಾಂಪ್ರದಾಯಿಕ ಊಟದ ನಂತರ, ಡಾ. ನಿಂಬಾಳ್ಕರ್ ಅವರು ಕೈಬೀಸುವ ಕಲ್ಲಿನಲ್ಲಿ (ಜಾತ) ಇಡೀ ಉದ್ದಿನಬೇಳೆಯನ್ನು ಬೀಸುವ ಪ್ರಯತ್ನ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅಜ್ಜಿಯನ್ನು ಸ್ಮರಿಸಿದ ಅವರು, ʼಬೇಸಿಗೆ ರಜೆಯಲ್ಲಿ ಹಳ್ಳಿಗೆ ಹೋದಾಗ, ನಮ್ಮ ಅಜ್ಜಿ 12 ವರ್ಷ ವಯಸ್ಸಿನಿಂದಲೇ ನಮಗೆ ಈ ಎಲ್ಲ ಕೆಲಸಗಳನ್ನು ಮಾಡುವಂತೆ ತರಬೇತಿ ನೀಡುತ್ತಿದ್ದರು. ಮುಂದೆ ಜೀವನದಲ್ಲಿ ಅದನ್ನು ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಎಲ್ಲದರ ಬಗ್ಗೆ ಜ್ಞಾನ ಇರಬೇಕುʼ ಎಂಬುದು ಅವರ ತತ್ವವಾಗಿತ್ತು ಎಂದು ತಿಳಿಸಿದ್ದಾರೆ.
ತಮ್ಮ ಅಜ್ಜಿ ಸುಮಾರು 20-25 ಸೋದರ ಸಂಬಂಧಿಗಳು ಸೇರಿದಂತೆ ತಮ್ಮ ತಾಯಿಗೂ ಈ ರೀತಿ ಸಂಸ್ಕಾರಯುತ ಜೀವನದ ಪಾಠ ಕಲಿಸಿದ ನೆಲಮಟ್ಟದ ಗುರು ಎಂದು ಅವರು ಪ್ರಶಂಸಿದ್ದಾರೆ. ರೈತ ಬೆಳೆದ ಪ್ರತಿಯೊಂದು ಕಾಳಿನ ಮೌಲ್ಯವನ್ನು ಅಜ್ಜಿ ಕಲಿಸಿದ್ದರು, ಮತ್ತು ಇಂದಿನ ಈ ಊಟವು ಅವರ ಆಶೀರ್ವಾದದಂತೆ ಭಾಸವಾಯಿತು ಎಂದು ಡಾ. ಅಂಜಲಿ ನಿಂಬಾಳ್ಕರ್ ಭಾವನಾತ್ಮಕವಾಗಿ ಹೇಳಿದ್ದಾರೆ.
