ಬೆಂಗಳೂರು: “11 ತಿಂಗಳು ಬಡ್ಡಿ ಇಲ್ಲದೆ ಸಾಲ” ಎಂದು ಜನರನ್ನು ನಂಬಿಸಿದ ಎಮಿರೆಟ್ ಎಂಬ ಕಂಪನಿ (emirat-company)ಯು ಭಾರೀ ಮಟ್ಟದ ವಂಚನೆ ನಡೆಸಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಈ ಕಂಪನಿ, ಚಿನ್ನದ ಆಭರಣಗಳ ಮೇಲೆ 50-60% ಸಾಲ ನೀಡುವುದಾಗಿ ಹೇಳಿ ಜನರ ವಿಶ್ವಾಸ ಗಳಿಸಿತ್ತು.
ಆದರೆ, 11 ತಿಂಗಳ ಕಾಲ ಚಿನ್ನ ಬಿಡಿಸಿಕೊಳ್ಳಲು ಅವಕಾಶ ಇರಲಿಲ್ಲ ಎಂಬ ನಿಯಮದ ಅಡಿಯಲ್ಲಿ ಜನರು ಚಿನ್ನ ಅಡವಿಟ್ಟು ಹಣ ಪಡೆದರು. ಬಳಿಕ 11 ತಿಂಗಳ ನಂತರ ಚಿನ್ನ ಬಿಡಿಸಿಕೊಳ್ಳಲು ಬಂದಾಗ ಕಂಪನಿ ಕಚೇರಿ ಮುಚ್ಚಿ ಸಿಬ್ಬಂದಿ ಪರಾರಿಯಾಗಿದ್ದರು!
ಮೋಸ ಹೋದ ಗ್ರಾಹಕರು ಸಿಸಿಬಿ (CCB Police) ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.450 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಸ್ತುಗಳು ಮತ್ತು ಚಿನ್ನ ಕರಗಿಸುವ ಯಂತ್ರ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಈ ವಂಚನಾ ಕಂಪನಿ ಕೇರಳ ಮತ್ತು ಮಂಗಳೂರು ಪ್ರದೇಶಗಳಲ್ಲಿಯೂ ಇದೇ ರೀತಿಯ ಮೋಸ ನಡೆಸಿರುವ ಮಾಹಿತಿ ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
