ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಇದೀಗ ಸಂಪೂರ್ಣ ಗೊಂದಲದ ಗೂಡಾಗಿದ್ದು, ಕೊನೆ ಕ್ಷಣದಲ್ಲಿ ರಣರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ನೂತನ ಸಚಿವರ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಸಚಿವರ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಈ ಹಗ್ಗಜಗ್ಗಾಟದ ಪರಿಣಾಮವಾಗಿ ನೂತನ ಸಚಿವರ ಅಂತಿಮ ಪಟ್ಟಿ ಈವರೆಗೂ ರಾಜಭವನವನ್ನು ತಲುಪಿಲ್ಲ.
ಈ ಮೊದಲು ಸಿದ್ಧಪಡಿಸಲಾಗಿದ್ದ ಹಳೆಯ ಪಟ್ಟಿಯನ್ನು ಸದ್ಯಕ್ಕೆ ಪರಿಗಣಿಸದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಭವನಕ್ಕೆ ಮನವಿ ಮಾಡಿದ್ದಾರೆ. ಆಕಾಂಕ್ಷಿಗಳ ನಡುವಿನ ತೀವ್ರ ಪೈಪೋಟಿ, ಜಾತಿ-ಪ್ರಾದೇಶಿಕ ಲೆಕ್ಕಾಚಾರ ಹಾಗೂ ಅತೃಪ್ತರ ಬಂಡಾಯ ಶಮನದ ನಿಟ್ಟಿನಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ ಪಟ್ಟಿಯಲ್ಲಿ ಕಡೇ ಘಳಿಗೆಯ ಪರಿಷ್ಕರಣೆಗಳು ನಡೆಯುತ್ತಿವೆ. ಹೀಗಾಗಿ ರಾಜಭವನದಲ್ಲಿ ಸಚಿವರ ಪಟ್ಟಿ ಇನ್ನೂ ಅಧಿಕೃತಗೊಂಡಿಲ್ಲ.
ಸರ್ಕಾರದ ಕಡೆಯಿಂದ ಅಂತಿಮಗೊಳಿಸಲಾದ ಹೊಸ ಪಟ್ಟಿ ರಾಜಭವನಕ್ಕೆ ರವಾನೆಯಾಗಿ, ಅಲ್ಲಿಂದ ಅಧಿಕೃತ ಮುದ್ರೆ ಬಿದ್ದ ಬಳಿಕವಷ್ಟೇ ನೂತನ ಸಚಿವರ ಪ್ರಮಾಣವಚನ (ಪದಗ್ರಹಣ) ಕಾರ್ಯಕ್ರಮ ನೆರವೇರಲಿದೆ. ಸದ್ಯದ ಈ ತ್ವರಿತ ರಾಜಕೀಯ ಬೆಳವಣಿಗೆಗಳು ಮತ್ತು ಗೊಂದಲದ ವಾತಾವರಣದಿಂದಾಗಿ ನಿಗದಿತ ಸಮಯಕ್ಕೆ ಪದಗ್ರಹಣ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲಿದೆಯೇ ಅಥವಾ ಮತ್ತಷ್ಟು ವಿಳಂಬವಾಗಲಿದೆಯೇ ಎಂಬ ತೀವ್ರ ಕುತೂಹಲ ರಾಜ್ಯ ರಾಜಕೀಯ ವಲಯದಲ್ಲಿ ಮನೆಮಾಡಿದೆ.
